ಸೋಮವಾರಪೇಟೆ, ಮಾ. 7: ಸೋಮವಾರಪೇಟೆಯಿಂದ ಸಿಲ್ವರ್ ಮರದ ನಾಟಾಗಳನ್ನು ಹಾಸನಕ್ಕೆ ಸಾಗಿಸುತ್ತಿದ್ದ ಲಾರಿಯೊಂದು ಸಮೀಪದ ಹೊನವಳ್ಳಿ ಗ್ರಾಮದ ಮುಖ್ಯ ರಸ್ತೆಯಲ್ಲಿ ಮಗುಚಿಕೊಂಡಿದೆ.

ಮಧ್ಯರಾತ್ರಿ ಘಟನೆ ಸಂಭವಿಸಿದ್ದು ಡ್ರೈವರ್ ಮತ್ತು ಕ್ಲೀನರ್ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಶನಿವಾರಸಂತೆಯ ಸತೀಶ್ ಎಂಬವರಿಗೆ ಸೇರಿದ ಲಾರಿಯಲ್ಲಿ ರಾತ್ರಿ ವೇಳೆ ಹಾಸನದ ಕಡೆಗೆ ಸಿಲ್ವರ್ ಮರಗಳನ್ನು ಸಾಗಿಸಲಾಗುತ್ತಿತ್ತು.

ಅಪಘಾತ ನಡೆದ ಸ್ಥಳ ಇಳಿಜಾರಿನಿಂದ ಕೂಡಿದ ತಿರುವು ರಸ್ತೆಯಾಗಿದ್ದು, ಎಚ್ಚರ ತಪ್ಪಿದರೆ ಅಪಾಯ ಖಂಡಿತ. ಸೋಮವಾರಪೇಟೆ ಶನಿವಾರಸಂತೆ ರಾಜ್ಯ ಹೆದ್ದಾರಿ ಇದಾಗಿದ್ದು, ಹಗಲಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಸಂಚರಿಸುತ್ತಿರುತ್ತವೆ. ಲಾರಿ ಮಗುಚಿಕೊಂಡ ಸಂದರ್ಭ ವಾಹನಗಳ ಸಂಚಾರವಿರಲಿಲ್ಲವಾದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ.