ಸೋಮವಾರಪೇಟೆ, ಮಾ. 7: ಸಮೀಪದ ಯಡೂರು ವೈಸಿಸಿ ಕ್ರಿಕೆಟ್ ಕ್ಲಬ್‍ನ ಮುಕ್ತ ಟೆನ್ನಿಸ್‍ಬಾಲ್ ಕ್ರಿಕೆಟ್ ಟ್ರೋಫಿಯನ್ನು ಗಣೇಶ್ ಫ್ರೆಂಡ್ಸ್ ಸುಂಟಿಕೊಪ್ಪ ಮುಡಿಗೇರಿಸಿಕೊಂಡಿತು. ರೈಸಿಂಗ್ ಸ್ಟಾರ್ ಕಲ್ಕಂದೂರು ತಂಡ ದ್ವಿತೀಯ ಸ್ಥಾನ ಪಡೆಯಿತು.ಯಡೂರು ಬಿಟಿಸಿಜಿ ಸರ್ಕಾರಿ ಪದವಿ ಕಾಲೇಜು ಮೈದಾನದಲ್ಲಿ ನಡೆದ ಫೈನಲ್ ಪಂದ್ಯಾಟದಲ್ಲಿ ವಿಜೇತ ತಂಡ, ನಾಲ್ಕು ಓವರ್‍ಗಳಲ್ಲಿ 4 ವಿಕೆಟ್ ನಷ್ಟಕ್ಕೆ 29 ರನ್ ಗಳಿಸಿತು. ರೈಸಿಂಗ್ ಸ್ಟಾರ್ ತಂಡ ನಾಲ್ಕು ಓವರ್‍ಗಳಲ್ಲಿ 5 ವಿಕೆಟ್ ಕಳೆದುಕೊಂಡು 16 ರನ್‍ಗಳನ್ನು ಗಳಿಸಿ, ಸೋಲೊಪ್ಪಿಕೊಂಡಿತು.

ಮೊದಲ ಸೆಮಿಫೈನಲ್‍ನಲ್ಲಿ ರೈಸಿಂಗ್ ಸ್ಟಾರ್ ತಂಡ, ಬಿಟಿಸಿಜಿ ಕಾಲೇಜು ತಂಡವನ್ನು ಸೋಲಿಸಿ ಫೈನಲ್‍ಗೇರಿತು. ಕಾಲೇಜು ತಂಡ ಐದು ಓವರ್‍ಗೆ 4 ವಿಕೆಟ್ ಕಳೆದುಕೊಂಡು 40 ರನ್‍ಗಳಿಸಿತು. ವಿಜೇತ ತಂಡ 3.3 ಓವರ್‍ಗಳಲ್ಲಿ 41 ರನ್‍ಗಳನ್ನು ಹೊಡೆದು ಗೆಲುವಿನ ನಗೆ ಬೀರಿತು.

ಎರಡನೆ ಸೆಮಿಫೈನಲ್‍ನಲ್ಲಿ ಬ್ಲೂಬಾಯ್ಸ್ ಕೂಡಿಗೆ ತಂಡದ ವಿರುದ್ಧ, ಗಣೇಶ್ ಫ್ರೆಂಡ್ಸ್ ತಂಡ ಗೆಲುವು ಸಾಧಿಸಿ, ಫೈನಲ್‍ಗೇರಿತ್ತು. ಕೂಡಿಗೆ ತಂಡ 4 ಓವರ್‍ಗಳಲ್ಲಿ 2 ವಿಕೆಟ್ ಕಳೆದುಕೊಂಡು 33 ರನ್ ಕಲೆಹಾಕಿತ್ತು. ವಿಜೇತ ತಂಡ ಮೂರು ವಿಕೆಟ್ ನಷ್ಟಕ್ಕೆ 3.3.ಓವರ್‍ಗಳಲ್ಲಿ 34 ರನ್ ಗಳಿಸಿ ಗೆಲುವು ಕಂಡಿತು. ಸರಣಿ ಪುರುಷೋತ್ತಮ ಪ್ರಶಸ್ತಿಯನ್ನು ಸುಂಟಿಕೊಪ್ಪ ವಸಂತ್ ಪಡೆದರು. ಉತ್ತಮ ಹೊಡೆತಗಾರ ಅನಿಲ್ ಸುಂಟಿಕೊಪ್ಪ, ಉತ್ತಮ ಬೌಲರ್ ಇರ್ಷಾದ್ ಕಲ್ಕಂದೂರು, ಉತ್ತಮ ಕ್ಷೇತ್ರ ರಕ್ಷಕ ಶಿವ ಸುಂಟಿಕೊಪ್ಪ, ಭರ್ಜರಿ ಸಿಕ್ಸರ್ ಫಾರೂಕ್ ಕಲ್ಕಂದೂರು ಗಳಿಸಿದರು. ತೀರ್ಪುಗಾರರಾಗಿ ಯಶ್‍ವಂತ್, ಜೀವನ್, ವಿವೇಕ್, ಶರತ್, ಸಂದೇಶ್, ವಿನಯ್, ಸುರೇಶ್, ಲೋಹಿತ್, ನಾಗರಾಜ್, ಪರಮೇಶ್ ಕಾರ್ಯನಿರ್ವಹಿಸಿದರು.

ಬಹುಮಾನ ವಿತರಣಾ ಸಮಾರಂಭದಲ್ಲಿ ಜಿಪಂ ಸದಸ್ಯ ಬಿ.ಜೆ.ದೀಪಕ್, ಕ್ಲಬ್ ಅಧ್ಯಕ್ಷ ಸಿ.ಎಂ.ಸುರೇಶ್, ಪ್ರಮುಖರಾದ ವೈ.ಎಂ.ನಾಗರಾಜು, ಎ.ಈ. ಮಲ್ಲಪ್ಪ, ಭಾನುಪ್ರಕಾಶ್, ಬಿ.ಎಂ. ಆನಂದ್, ಡಿ.ಟಿ. ಪ್ರೀಮ್ ಮತ್ತಿತರರು ಇದ್ದರು. ಪ್ರಮುಖರಾದ ಸಿ.ಎಂ. ದಿನೇಶ್, ಲೋಕೇಶ್ ಅವರುಗಳನ್ನು ಸನ್ಮಾನಿಸಲಾಯಿತು.