ಸೋಮವಾರಪೇಟೆ, ಮಾ. 7: ಇಲ್ಲಿನ ಕಕ್ಕೆಹೊಳೆ ಸಮೀಪದ ಶ್ರೀ ಮುತ್ತಪ್ಪ ಸ್ವಾಮಿ ಮತ್ತು ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದ ಜಾತ್ರೋತ್ಸವ ತಾ. 12, 13 ಹಾಗೂ 14 ರಂದು ನಡೆಯಲಿದೆ.

ತಾ. 12 ರಂದು ಬೆಳಿಗ್ಗೆ 4.30 ರಿಂದ ಗಣಹೋಮ, ಶುದ್ದೀಪುಣ್ಯ ನಡೆದು ಧ್ವಜಾರೋಹಣ ನಡೆಯಲಿದೆ. ಅಂದು ಸಂಜೆ ನಡೆಯಲಿರುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಾಲಯ ಸಮಿತಿ ಅಧ್ಯಕ್ಷ ಎನ್.ಡಿ. ವಿನೋದ್ ಕುಮಾರ್ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಶಾಸಕ ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಸದಸ್ಯರುಗಳಾದ ಎಂ.ಪಿ. ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವಿ.ಎಂ. ವಿಜಯ ಹಾಗೂ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ವಿಜಯಲಕ್ಷ್ಮಿ ಸುರೇಶ್ ಪಾಲ್ಗೊಳ್ಳಲಿದ್ದಾರೆ.

ಸಭಾ ಕಾರ್ಯಕ್ರಮದ ನಂತರ 7 ಗಂಟೆಗೆ ಭದ್ರಾವತಿಯ ಲೋಕನಾಥ್ ತಂಡದವರಿಂದ ಆರ್ಕೆಸ್ಟ್ರಾ ಕಾರ್ಯಕ್ರಮ ನಡೆಯಲಿದೆ. ತಾ. 13 ರಂದು ಮಧ್ಯಾಹ್ನ 12.30ಕ್ಕೆ ದೈವಗಳ ವೆಳ್ಳಾಟಂ ಹಾಗೂ ಕೋಲ ಕಾರ್ಯಕ್ರಮಗಳು ಆರಂಭವಾಗಲಿದ್ದು, ಅಪರಾಹ್ನ 1.30ಕ್ಕೆ ಪ್ರಧಾನ ಅರ್ಚಕರಿಂದ ಕಲಶ ಪೂಜೆ, 3.30ಕ್ಕೆ ಮುತ್ತಪ್ಪ ದೈವದ ವೆಳ್ಳಾಟಂ ನಡೆಯಲಿದೆ.

ಸಂಜೆ 4.30ಕ್ಕೆ ಕೇರಳದ ಖ್ಯಾತ ಸಿಂಗಾರಿ ಮೇಳದೊಂದಿಗೆ ಮುತ್ತಪ್ಪ ದೈವದ ಮೊದಲ್ ಕಳಸದೊಂದಿಗೆ ಕಲಶಗಳ ಹಾಗೂ ಮುತ್ತಪ್ಪ-ತಿರುವಪ್ಪ ದೈವದ ಮೂರ್ತಿಗಳ ಭವ್ಯ ಮಂಟಪದೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯುವದು. ಸಂಜೆ 6.30ಕ್ಕೆ ವಿಷ್ಣುಮೂರ್ತಿ, 7 ಗಂಟೆಗೆ ಕರಿಂಗುಟ್ಟಿ, 7.30 ಕ್ಕೆ ಕಂಡಕರ್ಣ, ರಾತ್ರಿ 8.30ಕ್ಕೆ ಭಗವತಿ ದೇವಿ, 9.30ಕ್ಕೆ ರಕ್ತ ಚಾಮುಂಡಿ ದೇವಿ ಹಾಗೂ 10.30ಕ್ಕೆ ಪೊಟ್ಟನ್ ದೈವಗಳ ವೆಳ್ಳಾಟಂಗಳು ನಡೆಯಲಿದೆ. ರಾತ್ರಿ 11.30ಕ್ಕೆ ದೈವದ ಕಳಿಕ್ಕಾಪಾಟ್ ನಡೆಯಲಿದೆ.

ಇದೇ ದಿನ ರಾತ್ರಿ 7.30ರಿಂದ ದೇವಾಲಯಕ್ಕೆ ಆಗಮಿಸುವ ಭಕ್ತಾದಿಗಳಿಗೆ ಅನ್ನಸಂತರ್ಪಣಾ ಕಾರ್ಯ ದೇವಾಲಯದ ಆವರಣದಲ್ಲಿ ನಡೆಯಲಿದ್ದು, ಹೊರ ಆವರಣದಲ್ಲಿ ಪಟಾಕಿ ಸಿದಿಮದ್ದಿನ ಪ್ರದರ್ಶನ ನಡೆಯಲಿದೆ.

ತಾ. 14 ರಂದು ಬೆಳಗ್ಗಿನ ಜಾವ 1 ಗಂಟೆಗೆ ಭಗವತಿ ದೇವಿ, 2 ಗಂಟೆಗೆ ಕಂಡಕರ್ಣ, 3 ಗಂಟೆಗೆ ಪೊಟ್ಟನ್, 4 ಗಂಟೆಗೆ ಕರಿಂಗುಟ್ಟಿ ಶಾಸ್ತಾವು ದೈವಗಳ ಕೋಲ ನಡೆಯಲಿದೆ. 4.30ಕ್ಕೆ ಪೊಟ್ಟನ್ ದೈವ ಅಗ್ನಿಗೇರುವದು. 5 ಗಂಟೆಗೆ ಮುತ್ತಪ್ಪ ಹಾಗೂ ತಿರುವಪ್ಪ ದೈವಗಳ ಕೋಲ, ಬೆಳಿಗ್ಗೆ 7 ಗಂಟೆಗೆ ರಕ್ತಚಾಮುಂಡಿ ದೇವಿ, 9 ಗಂಟೆಗೆ ವಿಷ್ಣುಮೂರ್ತಿ ದೈವಗಳ ಕೋಲ, 10 ಗಂಟೆಗೆ ಕಂಡಕರ್ಣ ದೈವದ ಗುರುಶ್ರೀದರ್ಪಣ, ಮಧ್ಯಾಹ್ನ 12 ಗಂಟೆಗೆ ಗುಳಿಗ ದೈವದ ಕೋಲ, 1.30ಕ್ಕೆ ಗುಳಿಗ ದೈವಕ್ಕೆ ಬಲಿ ಅರ್ಪಣೆ ಹಾಗೂ ಅಪರಾಹ್ನ 3 ಗಂಟೆಗೆ ಉತ್ಸವದ ಮುಕ್ತಾಯ ಕಾರ್ಯಕ್ರಮ ನಡೆಯಲಿದೆ.