ಸಿದ್ದಾಪುರ, ಮಾ. 9: ಅಕ್ರಮ ಸಕ್ರಮದಡಿಯಲ್ಲಿ ನಿವೇಶನ ಒದಗಿಸಿ ಕೊಡಲಾಗುವದೆಂದು ಹಲವು ಬಡವರಿಂದ ಹಣ ವಸೂಲಿ ಮಾಡಿ ವಂಚನೆ ಮಾಡಿದ ಮೇರೆಗೆ ಈರ್ವರ ವಿರುದ್ಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.

ಸಿದ್ದಾಪುರ ಸಮೀಪದ ಬಜೆಗೊಲ್ಲಿ ನಿವಾಸಿಯಾಗಿರುವ ಸಿ.ರಾಜಶೇಖರ್ ಅವರಿಗೆ ಕಳೆದ 2 ವರ್ಷಗಳ ಹಿಂದೆ ಅಕ್ರಮ ಸಕ್ರಮದಡಿಯಲ್ಲಿ ನಿವೇಶನ ಒದಗಿಸಿ ಕೊಡುವದಾಗಿ ನಂಬಿಸಿ ನಾಪೋಕ್ಲುವಿನ ಚೆರಿಯಪರಂಬು ನಿವಾಸಿ ಸಬಿತಾ ಹಾಗೂ ಸಿದ್ದಾಪುರದ ವಿನೋದಿನಿ ರಾಜೇಶ್ ಎಂಬವರುಗಳು ಹಣ ಪಡೆದುಕೊಂಡು ನಿವೇಶನ ನೀಡದೆ ಹಣವನ್ನು ಹಿಂತಿರುಗಿಸದೇ ವಂಚನೆ ಮಾಡಿದ್ದಾರೆ ಎಂದು ದೂರು ನೀಡಿದ ಮೇರೆಗೆ ವಿನೋದಿನಿ ಹಾಗೂ ಸಬಿತಾ ವಿರುದ್ಧ ಸೆಕ್ಷನ್ 420 ಮೊಕದ್ದಮೆ ದಾಖಲಿಸಿಕೊಂಡಿರುವ ಠಾಣಾಧಿಕಾರಿ ಸುಬ್ರಮಣಿ ಅವರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಅಕ್ರಮ ಸಕ್ರಮದಡಿಯಲ್ಲಿ ನಿವೇಶನ ಸಿಗಬಹುದೆಂದು ನಂಬಿ 150ಕ್ಕೂ ಅಧಿಕ ಮಂದಿ ಸಾವಿರಾರು ರೂಪಾಯಿ ನೀಡಿದ್ದು ಈವರೆಗೂ ನಿವೇಶನ ಸಿಗದೆ, ಹಣ ಸಿಗದೆ ಪರದಾಡುತ್ತಿರುವದು ಬೆಳಕಿಗೆ ಬಂದಿದೆ.