ಮಡಿಕೇರಿ, ಮಾ. 10: ಬೆಟ್ಟತ್ತೂರು ‘ಕೂಪದಿರ ಭವನ’ದಲ್ಲಿ ಸಿ.ಎನ್.ಸಿ. ವತಿಯಿಂದ ಜನಜಾಗೃತಿ ಸಭೆ ನಡೆಯಿತು. ಕೊಡವ ಲ್ಯಾಂಡ್ ಕೇಂದ್ರಾಡಳಿತ ಪ್ರದೇಶ, ಕೊಡವರಿಗೆ ಸ್ವಾಯತ್ತತೆ, ಕೊಡವ ಬುಡಕಟ್ಟು ಕುಲವನ್ನು ಸಂವಿಧಾನದ 340 – 342ನೇ ವಿಧಿ ಪ್ರಕಾರ ಶೆಡ್ಯೂಲ್ ಪಟ್ಟಿಯಲ್ಲಿ ಸೇರಿಸಬೇಕು ಎಂದು ಸಿ.ಎನ್.ಸಿ. ಅಧ್ಯಕ್ಷ ಎನ್.ಯು. ನಾಚಪ್ಪ ಈ ಸಂದರ್ಭ ಆಗ್ರಹಿಸಿದರು.

ಕೊಡವರಿಗೆ ಸಂವಿಧಾನದ ಪ್ರಕಾರ ದೈಹಿಕ ರಕ್ಷಣೆ, ಆರ್ಥಿಕ ಭದ್ರತೆ ಮತ್ತು ಭೂಮಿಯ ಹಕ್ಕು ಅಭಾದಿತವಾಗಿ ಮುಂದುವರೆಸಬೇಕು ಮತ್ತು ಕೊಡÀವರ ಸಾಂಪ್ರದಾಯಿಕ ಆವಾಸ ನೆಲೆಗೆ ರಾಜ್ಯಾಂಗ ಖಾತರಿ ದೊರಕಿಸಬೇಕೆಂದು ಆಗ್ರಹಿಸಿದರು.

ಜಿಲ್ಲೆಯಲ್ಲಿ ಪಟ್ಟಭದ್ರರು ಅತಿಕ್ರಮಿಸಿ ರುವ ಒತ್ತುವರಿ ಭೂಮಿಯನ್ನು ತೆರವುಗೊಳಿಸಿ ಮಾಜಿ ಸೈನಿಕರಿಗೆ ಹಂಚಬೇಕೆಂದು ಸಿ.ಎನ್.ಸಿ. ಸಂಘಟನೆ 2012ರಲ್ಲಿ ಬೃಹತ್ ಆಂದೋಲನ ರೂಪಿಸಿದ್ದು, ಇಲ್ಲಿಯ ತನಕ ಒತ್ತುವರಿ ತೆರವಾಗಲಿಲ್ಲ ಬದಲಿಗೆ ಎಕರೆಯೊಂದಕ್ಕೆ 3 ಲಕ್ಷ ರೂ ಹಣ ಕಟ್ಟಿಸಿಕೊಂಡು ಗುಟ್ಟಾಗಿ ಸಕ್ರಮಗೊಳಿಸ ಲಾಗುತ್ತಿದ್ದು, ಸರಕಾರ ಕೊಡವರಿಗೆ ಮತ್ತು ಮಾಜಿ ಸೈನಿಕರಿಗೆ ಕಿರುಕುಳ ನೀಡುತ್ತಿದೆ ಎಂದು ನಾಚಪ್ಪ ಆರೋಪಿಸಿದರು.

ಕಾರ್ಯಕ್ರಮದಲ್ಲಿ ಕೂಪದಿರ ವಿಜಯ, ಕೂಪದಿರ ತಮ್ಮಯ್ಯ, ಕೂಪದಿರ ನಂಜಪ್ಪ, ಕೂಪದಿರ ಸಾಬು, ಆಪಾಡಂಡ ಅಯ್ಯಪ್ಪ ಮುಂತಾದವರು ಭಾಗವಹಿಸಿದ್ದರು.