ಶನಿವಾರಸಂತೆ, ಮಾ. 10: ಅಕ್ರಮವಾಗಿ ಮರಳು ಸಾಗಿಸುತ್ತಿದ್ದ 2 ಮಿನಿ ಟಿಪ್ಪರ್‍ಗಳನ್ನು ಪೊಲೀಸರು ವಶಪಡಿಸಿಕೊಂಡ ಘಟನೆ ಸಮೀಪದ ಹಾರೆಹೊಸೂರು ಗ್ರಾಮದಲ್ಲಿ ಶುಕ್ರವಾರ ಬೆಳಗ್ಗಿನ ಜಾವ ನಡೆದಿದೆ.

ಟಿಪ್ಪರ್‍ಗಳಾದ (ನಂ. ಕೆ.ಎ.12. ಎ. 9972 ಹಾಗೂ ಕೆ.ಎ. 21.ಎ. 3383) ರಲ್ಲಿ ಮರಳನ್ನು ತುಂಬಿಸಿಕೊಂಡು ಕಳ್ಳಸಾಗಣೆ ಮಾಡುತ್ತಿದ್ದ ಖಚಿತ ಮಾಹಿತಿ ದೊರೆತ ಅನ್ವಯ ಠಾಣಾಧಿಕಾರಿ ಎಂ. ಮರಿಸ್ವಾಮಿ, ಎಎಸ್‍ಐ ಖತೀಜಾ ಹಾಗೂ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಧಾವಿಸಿ ತಪಾಸಣೆ ಮಾಡುತ್ತಿದ್ದಾಗ ದೊಡ್ಡಳ್ಳಿ ಗ್ರಾಮದ ಕಡೆಯಿಂದ ಹಾರೆ ಹೊಸೂರು ಕಡೆಗೆ ಬರುತ್ತಿದ್ದ ಕಾರೊಂದನ್ನು ತಡೆದು ನಿಲ್ಲಿಸಲಾಗಿ ಕಾರಿನ ಹಿಂಭಾಗದಲ್ಲಿ ಬರುತ್ತಿದ್ದ 2 ಟಿಪ್ಪರ್‍ಗಳ ಚಾಲಕರು ಪರಾರಿಯಾದರು.

ಕಾರಿನಲ್ಲಿದ್ದವರನ್ನು (ನಂ.ಕೆ.ಎ. 46.ಎಂ. 2518) ವಿಚಾರಣೆಗೆ ಒಳಪಡಿಸಿದಾಗ ಆತ ಹುಲ್ಗತ್ತೂರು ಗ್ರಾಮದ ಪುರುಷೋತ್ತಮ ತಾನು ಟಿಪ್ಪರ್ ಲಾರಿಗಳಿಗೆ ಬೆಂಗಾವಲಾಗಿ ಮಾರ್ಗ ಸೂಚಿಸುತ್ತಿರುವದಾಗಿ ತಿಳಿಸಿದ ಎನ್ನಲಾಗಿದೆ. ಪೊಲೀಸರು 2 ಟಿಪ್ಪರ್‍ಗಳನ್ನು ಹಾಗೂ ಕಾರಿನೊಂದಿಗೆ ಮರಳು ಸಹಿತ ಆರೋಪಿ ಕಾರಿನ ಚಾಲಕನನ್ನು ವಶಪಡಿಸಿಕೊಂಡಿರುತ್ತಾರೆ, ಮರಳನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಮುಂದಿನ ಕ್ರಮಕ್ಕಾಗಿ ಸೂಚಿಸಿರುತ್ತಾರೆ. ಸಿಬ್ಬಂದಿಗಳಾದ ಸಫೀರ್, ವಿಶ್ವನಾಥ, ಸಂತೋಷ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.