ಮಡಿಕೇರಿ, ಮಾ. 10: ಇಲ್ಲಿನ ಅಶ್ವಿನಿ ಆಸ್ಪತ್ರೆಯು ಕಳೆದ 40 ವರ್ಷಗಳಿಂದ ಜಿಲ್ಲೆ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳ ರೋಗಿಗಳ ಸೇವೆಗೈಯುತ್ತಿದ್ದು, ಇದರ ಕಾರ್ಯ ಚಟುವಟಿಕೆಗಳ ಕುರಿತು ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಮತ್ತು ಧರ್ಮಸ್ಥಳದ ಧರ್ಮಾಧಿಕಾರಿ

ಡಾ|| ಡಿ. ವೀರೇಂದ್ರ ಹೆಗ್ಗಡೆಯವರು ವಾರ್ಷಿಕ ಭೇಟಿಯ ಸಮಯದಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ.

ಆಸ್ಪತ್ರೆಯ ಸಂಸ್ಥಾಪಕ ಪೇಜಾವರ ಶ್ರೀಗಳು ಈ ಆಸ್ಪತ್ರೆಗೆ ಬರುವ ರೋಗಿಗಳಿಗೆ ಮತ್ತು ದಾನಿಗಳಿಗೆ ಶ್ರೀ ಕೃಷ್ಣನು ಸನ್ಮಂಗಳ ಕರುಣಿಸುವನು ಎಂದು ಹಾರೈಸಿ ತಮ್ಮ ಪರ್ಯಾಯ ಮುಗಿದ ಬಳಿಕ ಅಶ್ವಿನಿ ಆಸ್ಪತ್ರೆಗೆ ಭೇಟಿ ನೀಡುವದಾಗಿ ತಿಳಿಸಿದರು. ಆಸ್ಪತ್ರೆಯ ಆಡಳಿತ ಮಂಡಳಿಯ ಪ್ರತಿನಿಧಿ ಎಂ.ಸಿ. ಗೋಖಲೆ, ವೈದ್ಯ ಡಾ. ಕುಲಕರ್ಣಿ ಮತ್ತು ಡಾ ಅರುಣಕುಮಾರಿ ಇವರುಗಳ 3 ದಶಕಗಳ ಸಂಪೂರ್ಣ ಸೇವೆಯನ್ನು ಪರಿಗಣಿಸಿ ಶಾಲು ಹೊದಿಸಿ ಆಶೀರ್ವದಿಸಿದರು.

ಇದಕ್ಕೂ ಮೊದಲು ಧರ್ಮಸ್ಥಳದ ಧರ್ಮಾಧಿಕಾರಿಗಳು ಆಸ್ಪತ್ರೆಯ ಮಾರ್ಗದರ್ಶಕ ಡಾ|| ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿ ಆಸ್ಪತ್ರೆಯ ವಾರ್ಷಿಕ ವರದಿಯನ್ನು ಸಲ್ಲಿಸಲಾಯಿತು. ಇಲ್ಲಿನ ಸೇವಾರ್ಥಿಗಳಿಗೆ, ಸಿಬ್ಬಂದಿಗಳಿಗೆ ಮತ್ತು ಎಲ್ಲಾ ರೋಗಿಗಳಿಗೆ ಶ್ರೀ ಮಂಜುನಾಥಸ್ವಾಮಿ ಕೃಪೆ ತೋರಲೆಂದು ಅವರು ಈ ಸಂದರ್ಭ ಹಾರೈಸಿದರು.