ಸಿದ್ದಾಪುರ, ಮಾ. 12: ಮೂರ್ನಾಡಿನ ಗೌತಮ್ ಫ್ರೆಂಡ್ಸ್ ವತಿಯಿಂದ ಕೊಡಗು ಪ್ರಿಮಿಯರ್ ಲೀಗ್ ವಾಲಿಬಾಲ್ ಪಂದ್ಯಾಟ ಆಯೋಜಿಸಿರುವದಾಗಿ ಸಂಘದ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಅಂದಾಯಿ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಏ. 6 ಮತ್ತು 7 ರಂದು ಮೂರ್ನಾಡಿನ ಸಹಕಾರಿ ಸ್ಪೋಟ್ರ್ಸ್ ಕ್ಲಬ್ ಮೈದಾನದಲ್ಲಿ ಪಂದ್ಯಾಟ ನಡೆಯಲಿದ್ದು, ಜಿಲ್ಲೆಯ ಆಟಗಾರರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಪಂದ್ಯಾಟಕ್ಕೆ ಜಿಲ್ಲೆಯ 10 ತಂಡಗಳು ಹೆಸರು ನೋಂದಾಯಿಸಿದ್ದು, ಬಿಡ್ಡಿಂಗ್ ಮೂಲಕ ಆಟಗಾರರನ್ನು ತಂಡಕ್ಕೆ ನೀಡಲಾಗುವದು ಎಂದರು. ಪ್ರತಿ ಪಂದ್ಯಾಟ 25 ಅಂಕಗಳಿಂದ ಕೂಡಿದ ಮೂರು ಸುತ್ತಿನ ಪಂದ್ಯಗಳಾಗಿರುತ್ತದೆ. ವಿಜೇತ ತಂಡಕ್ಕೆ ರೂ. 40 ಸಾವಿರ ನಗದು ಮತ್ತು ಟ್ರೋಫಿ, ದ್ವಿತೀಯ ಬಹುಮಾನ ರೂ. 25 ಸಾವಿರ ನಗದು ಮತ್ತು ಟ್ರೋಫಿ, 3 ಮತ್ತು 4ನೇ ಸ್ಥಾನಗಳಿಸಿದ ತಂಡಗಳಿಗೆ ತಲಾ ರೂ. 10 ಸಾವಿರ ನಗದು ನೀಡಲಾಗುವದು ಎಂದರು. ಹೆಚ್ಚಿನ ಮಾಹಿತಿಗಾಗಿ 9740301963 ಸಂಖ್ಯೆಯನ್ನು ಸಂಪರ್ಕಿಸಲು ಕೋರಿದ್ದಾರೆ.

ಸಂಘದ ಅಧ್ಯಕ್ಷ ಬಲ್ಲಚಂಡ ಗೌತಮ್ ಮಾತನಾಡಿ, ಜಿಲ್ಲೆಯಲ್ಲಿ ಉತ್ತಮ ವಾಲಿಬಾಲ್ ಆಟಗಾರರಿದ್ದು, ಜಿಲ್ಲಾ ವಾಲಿಬಾಲ್ ಸಂಸ್ಥೆ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವಲ್ಲಿ ವಿಫಲವಾಗಿದೆ. ಈ ಬಗ್ಗೆ ರಾಜ್ಯ ವಾಲಿಬಾಲ್ ಸಂಸ್ಥೆಗೆ ದೂರು ನೀಡಲಾಗಿದೆ ಎಂದರು.

ಗೋಷ್ಠಿಯಲ್ಲಿ ಉಪಾಧ್ಯಕ್ಷ ಅಮ್ಮಂಡ ಸುಮನ್ ತಿಮ್ಮಯ್ಯ, ಸದಸ್ಯ ಯಹ್ಯಾ ಮತ್ತು ರಶೀದ್ ಇದ್ದರು.