ಕೂಡಿಗೆ, ಮಾ. 12: ಕೂಡುಮಂಗಳೂರು ಗ್ರಾ.ಪಂ. ವ್ಯಾಪ್ತಿಯ ಕೂಡಿಗೆ ಹಾಲಿನ ಡೈರಿಯ ಮುಂಭಾಗದಲ್ಲಿ ತೆಂಗಿನ ಮರಗಳು ಅನೇಕವಿದ್ದು ಮರಗಳ ಮಧ್ಯದಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿಯು ತೆಂಗಿನ ಮರವೊಂದಕ್ಕೆ ತಗುಲಿದ ಪರಿಣಾಮ ಬೆಂಕಿ ಹತ್ತಿ ಸಂಪೂರ್ಣ ಸುಟ್ಟು ಹೋದ ಘಟನೆ ನಡೆಯಿತು.

ಹತ್ತಿರದಲ್ಲಿಯೇ ಇದ್ದ ತೆಂಗಿನ ಮರದ ಒಣಗಿದ ರೆಕ್ಕೆಗಳಿಗೆ ತಗಲಿದ ಪರಿಣಾಮ ಇಡೀ ತೆಂಗಿನ ಮರವೇ ಹೊತ್ತಿ ಉರಿಯಿತು. ಮರದಲ್ಲಿದ್ದ ಒಣಗಿದ ತೆಂಗಿನ ಕಾಯಿಗಳು ಕೂಡ ಬೆಂಕಿಗೆ ಆಹುತಿಯಾದವು. ಫಲ ನೀಡುತ್ತಿದ್ದ ತೆಂಗಿನ ಮರಕ್ಕೆ ಬೆಂಕಿ ಹೊತ್ತಿ ಅರ್ಧತಾಸಿನಲ್ಲಿ ಇಡೀ ಮರ ಬೆಂಕಿಗೆ ಆಹುತಿಯಾಯಿತು. ಸಾರ್ವಜನಿಕರು ಬೆಂಕಿ ನಂದಿಸಲು ಸಾಧ್ಯವಾಗದೆ ತಮ್ಮ ಮೊಬೈಲ್ ಮೂಲಕ ದೃಶ್ಯವನ್ನು ಸೆರೆ ಹಿಡಿಯಲು ತಾ ಮುಂದು ನಾ ಮುಂದು ಎನ್ನುತ್ತಿದ್ದರು.

ನಂತರ ಸಮೀಪದ ಟ್ರಾನ್ಸ್‍ಫಾರಂನಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ತಕ್ಷಣ ಬೆಂಕಿ ನಂದಿಸುವಲ್ಲಿ ಸಾರ್ವಜನಿಕರು ಹಾಗೂ ಇಲಾಖೆಯ ಸಿಬ್ಬಂದಿಗಳು ಕಾರ್ಯನಿರ್ವಹಿಸಿದರು.