ಸಿದ್ದಾಪುರ, ಮಾ. 12: ಬಿಳುಗುಂದ ಗ್ರಾ.ಪಂ. ವ್ಯಾಪ್ತಿಯಲ್ಲಿ ಜಿ.ಪಂ. ಹಾಗೂ ತಾ.ಪಂ. ಅನುದಾನದಲ್ಲಿ ವಿವಿಧ ಕಾಮಗಾರಿಗಳಿಗೆ ಜಿ.ಪಂ. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಮೂಕೊಂಡ ವಿಜು ಸುಬ್ರಮಣಿ ಭೂಮಿಪೂಜೆ ನೆರವೇರಿಸಿದರು.

ಬಿಳುಗುಂದ ಗ್ರಾ.ಪಂ. ವ್ಯಾಪ್ತಿಯ ದೇವಾಲಯ ಸಮೀಪದ ತಡೆಗೋಡೆ, ರಸ್ತೆ ಕಾಮಗಾರಿ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ಸಲ್ಲಿಸಿ, ಮಾತನಾಡಿದ ಅವರು, ಕುಗ್ರಾಮವಾಗಿರುವ ಈ ಗ್ರಾಮಗಳಿಗೆ ಸರಕಾರದ ಅನುದಾನ ಬಂದಲ್ಲಿ ಹಂತ ಹಂತವಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವದೆಂದು ಭರವಸೆ ನೀಡಿದರು. ಮುಂದಿನ ಅನುದಾನದಲ್ಲಿ ನಲ್ವತ್ತೋಕ್ಲು ಗ್ರಾಮದಲ್ಲಿ ರಸ್ತೆ ಕಾಮಗಾರಿ ಮಾಡಲಾಗುವದೆಂದು ಭರವಸೆ ನೀಡಿದರು. ಪಂಚಾಯಿತಿ ವ್ಯಾಪ್ತಿಯಲ್ಲಿ ಈಗಾಗಲೇ ಸಾಕಷ್ಟು ಕಾಮಗಾರಿಗಳು ಪ್ರಗತಿಯಲ್ಲಿದೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭ ತಾ.ಪಂ. ಸದಸ್ಯೆ ಶೋಭಾ, ಗ್ರಾ.ಪಂ. ಸದಸ್ಯರಾದ ಚೆಲ್ಲವಂಡ ಕಾವೇರಪ್ಪ, ಐನಂಡ ಪ್ರತಾಪ್, ವಸಂತಿ, ಹೆಚ್. ಪ್ರವೀಣ, ಸುಕುಮ, ಪಿ.ಡಿ.ಓ. ಪ್ರಮೋದ್ ಗ್ರಾಮಸ್ಥರಾದ ಸುಲೈಮಾನ್, ಯೋಗೇಶ್, ಮುಸ್ತಫಾ, ಅರುಣ, ಗಣಪತಿ, ಲವ, ಹ್ಯಾರೀಸ್ ಹಾಗೂ ಮಹಿಳಾ ಸಂಘದ ಪದಾಧಿಕಾರಿಗಳು ಹಾಜರಿದ್ದರು.