ಸಿದ್ದಾಪುರ, ಮಾ. 12: ವ್ಯಕ್ತಿಯೋರ್ವ ಸಂಬಂಧಿಕರ ಸಾವಿನ ಮನೆಯಲ್ಲಿ ತನ್ನ ಪತ್ನಿಯನ್ನು ಬರ್ಬರವಾಗಿ ಹತ್ಯೆಮಾಡಿರುವ ಘಟನೆ ಇಲ್ಲಿಗೆ ಸಮೀಪದ ವಾಲ್ನೂರು ಗ್ರಾಮದ ಬಾಳೆಗುಂಡಿ ಕಾಲೋನಿಯಲ್ಲಿ ನಡೆದಿದೆ.

ಬಾಳೆಗುಂಡಿಯ ನಿವಾಸಿ ಜೇನುಕುರುಬರ ವಸಂತ (27) ಹಾಗೂ ಆತನ ಪತ್ನಿ ಪವಿತ್ರ (25) ನಡುವೆ ಕೌಟುಂಬಿಕ ವಿಚಾರಕ್ಕೆ ಕಲಹ ನಡೆಯುತ್ತಿತ್ತು ಎನ್ನಲಾಗಿದೆ. ಪತಿ ವಸಂತನ ಕಿರುಕುಳ ತಾಳಲಾರದೆ ಪತ್ನಿ ಪವಿತ್ರ ತನ್ನ ತವರು ಮನೆಯಲ್ಲಿ ಒಂದು ವರ್ಷದಿಂದ ವಾಸವಾಗಿದ್ದಳು. ತಾ. 11 ರಂದು ಸಂಜೆ ಪವಿತ್ರ ತನ್ನ ಅಜ್ಜಿ ಬೋಜಿಯ ಮನೆಗೆ ತೆರಳಿದ್ದು, ಅಜ್ಜಿಯ ತಮ್ಮನ ಸಾವಿನಲ್ಲಿ ಭಾಗಿಯಾಗಿದ್ದಳು. ಈ ಸಂದರ್ಭ ವರ್ಷದಿಂದ ಪತ್ನಿಯನ್ನು ತೊರೆದಿದ್ದ ಗಂಡ ವಸಂತ ಕೂಡ ಸಾವಿಗೆ ಬಂದಿದ್ದಾನೆ. ಈತನು ರಾತ್ರಿ ಅಲ್ಲಿಯೇ ತಂಗಿದ್ದಾನೆ.ಕಳೆದ ಒಂದು ವರ್ಷದಿಂದ ಪತ್ನಿಯಿಂದ ಬೇರ್ಪಟ್ಟಿದ್ದ ಆತ ಆಕೆಯ ಸಂಗ ಬಯಸಿದ್ದಾಗಿಯೂ, ಆಕೆ ಸಹಕರಿಸಿಲ್ಲವೆಂದೂ ಗೊತ್ತಾಗಿದೆ. ಈ ವೇಳೆ ಗಲಾಟೆಯಾಗಿದ್ದು, ಅಲ್ಲಿದ್ದವರು ವಸಂತ ಮತ್ತು ಪವಿತ್ರ ಬೇರೆ ಬೇರೆಯಾಗಿ ತಂಗಲು ವ್ಯವಸ್ಥೆಗೊಳಿಸಿದ್ದಾರೆ.

ಇದರಿಂದ ಮತ್ತಷ್ಟು ಕುಪಿತನಾಗಿದ್ದ ಆರೋಪಿಯು, ಇಂದು ಬೆಳಿಗ್ಗೆ ಪವಿತ್ರ ತನ್ನ ಮಗುವಿಗೆ ನಾಡುಮದ್ದು (ಸೊಪ್ಪಿನ ರಸ) ಅರೆಯುತ್ತಿದ್ದಾಗ, ಜತೆಗಿದ್ದ ಅಜ್ಜಿಗೆ ಕುಡಿಯಲು ನೀರು ತರುವಂತೆ ಮನೆಯೊಳಗೆ ಕಳುಹಿಸಿರುವ ಆರೋಪಿ ಪತ್ನಿಯನ್ನು ಕೊಚ್ಚಿ ಕೊಲೆಗೈದಿದ್ದಾನೆ. ಅಜ್ಜಿ ನೀರು ತರುವಷ್ಟರಲ್ಲಿ ಪವಿತ್ರಳನ್ನು ಕೊಂದು ಸ್ಥಳದಿಂದ ಪರಾರಿಯಾಗಿದ್ದಾನೆ.

ಏಕಾಏಕಿ ಪವಿತ್ರಳ ಕುತ್ತಿಗೆ ಹಾಗೂ ಮುಖದ ಭಾಗಕ್ಕೆ ಕತ್ತಿಯಿಂದ ಕಡಿದಿದ್ದು, ಗಂಬೀರ ಗಾಯಗೊಂಡ ಪವಿತ್ರ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಈ ಬಗ್ಗೆ ಸಿದ್ದಾಪುರ ಪೊಲೀಸರು ಶ್ವಾನದಳದೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಬಲೆ ಬೀಸಿದ್ದಾರೆ.

ಮೃತೆ ಪವಿತ್ರಳಿಗೆ 8 ವರ್ಷದ ಹೆಣ್ಣು ಮಗುವಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಸ್ಥಳಕ್ಕೆ ಮಡಿಕೇರಿ ವಿಭಾಗದ ಡಿ.ವೈ.ಎಸ್.ಪಿ. ಛಬ್ಬಿ, ವೃತ್ತನಿರೀಕ್ಷಕ ಮೇದಪ್ಪ, ಸಿದ್ದಾಪುರ ಪೊಲೀಸ್ ಠಾಣಾಧಿಕಾರಿ ಸುಬ್ರಮಣ್ಯ ಭೇಟಿ ನೀಡಿ ಪರಿಶೀಲಿಸಿದರು. -ವಾಸು ಎ.ಎನ್.