ಕುಶಾಲನಗರ, ಮಾ 14: ವರ್ತಕರ ಶ್ರೇಯೋಭಿವೃದ್ಧಿಗಾಗಿ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ ಎಂದು ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಬಿ.ಎನ್. ಪ್ರಕಾಶ್ ಹೇಳಿದರು. ಕುಶಾಲನಗರದ ಎಪಿಸಿಎಂಎಸ್ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ನಡೆದ 2015-16 ಮತ್ತು 2016-17ನೇ ಸಾಲಿನ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರÀು. 50 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿರುವ ಜಿಲ್ಲೆಯ ಸಂಸ್ಥೆ ಪ್ರಸಕ್ತ ಕೊಡಗು ಜಿಲ್ಲೆಯಲ್ಲಿ 14 ಸ್ಥಾನೀಯ ಸಂಸ್ಥೆಗಳನ್ನು ಹೊಂದಿದೆ. ವರ್ತಕರ ಕಲ್ಯಾಣಕ್ಕಾಗಿ ಹಾಗೂ ಸಾಮಾಜಿಕ ಕಳಕಳಿಯೊಂದಿಗೆ ಸಂಸ್ಥೆ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.

ವರ್ತಕರಿಗೆ ಸರಕಾರದ ನೀತಿ ನಿಯಮಾವಳಿಗಳ ಅರಿವನ್ನು ಮೂಡಿಸುವದರೊಂದಿಗೆ ವಿವಿಧ ಇಲಾಖೆಗಳ ಮಾಹಿತಿಗಳನ್ನು ಒದಗಿಸಲು ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುತ್ತಿದೆ. ಕುಶಾಲನಗರದ ಸ್ಥಾನೀಯ ಸಮಿತಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಅವರು ಶ್ಲಾಘನೆ ವ್ಯಕ್ತಪಡಿಸಿದರು.

ಜಿಲ್ಲಾ ಚೇಂಬರ್ ಸಂಸ್ಥೆ ಎಲ್ಲಾ ಸ್ಥಾನೀಯ ಸಂಸ್ಥೆಗಳಿಂದ ಸಂಗ್ರಹಿಸಿದ ಸದಸ್ಯರ ಶುಲ್ಕವನ್ನು ಠೇವಣಿಯಾಗಿರಿಸಿ ಅದರಿಂದ ಬಂದ ಬಡ್ಡಿ ಹಣದಲ್ಲಿ ಕಾರ್ಯಕ್ರಮಗಳನ್ನು ರೂಪಿಸ ಲಾಗುತ್ತಿದೆ. ಜಿಲ್ಲೆಯಲ್ಲಿ ಬಂದ್ ಸಂದರ್ಭ ವರ್ತಕರಿಗೆ ಕಿರುಕುಳ ವಾಗದಂತೆ ಎಲ್ಲಾ ಸಂಘ-ಸಂಸ್ಥೆಗಳು ಸಹಕಾರ ಮಾಡಬೇಕೆಂದು ಅವರು ಈ ಸಂದರ್ಭ ಕೋರಿದರು.

ಕುಶಾಲನಗರದ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಶರವಣ ಕುಮಾರ್ ಮಾತನಾಡಿ, ಅಧಿಕಾರ ವಹಿಸಿಕೊಂಡ ನಾಲ್ಕು ವರ್ಷಗಳ ಅವಧಿಯಲ್ಲಿ ಸಂಘ ಎಲ್ಲಾ ನಿರ್ದೇಶಕರ, ಸದಸ್ಯರ ಸಲಹೆ ಸೂಚನೆಗಳಿಗೆ ಅನುಗುಣವಾಗಿ ಉತ್ತಮವಾಗಿ ಕಾರ್ಯನಿರ್ವಹಿಸಿದೆ. ಬಂದ್ ಮತ್ತು ಗಲಭೆಗಳ ವಿಚಾರದಲ್ಲಿ ಕೊಡಗಿನಲ್ಲಿ ಕುಶಾಲನಗರದ ವರ್ತಕರು ಸಮಸ್ಯೆಗೆ ಬಲಿಯಾಗುತ್ತಿದ್ದು ಇಂತಹ ಸಂದರ್ಭ ಎಲ್ಲರ ಸಹಕಾರ ಅಗತ್ಯ ಎಂದರು.

ವರ್ತಕರಿಗೆ ಇ-ಉಪಾಸ್ ಅಂದರೆ, ವಾಣಿಜ್ಯ ತೆರಿಗೆ, ಸರಕು ಸೇವಾ ತೆರಿಗೆ ಮುಂತಾದ ಇಲಾಖಾ ಮಾಹಿತಿಗಳ ಕಾರ್ಯಾಗಾರವನ್ನು ಸಂಘ ಏರ್ಪಡಿಸಿದ್ದು, ಸಂಸ್ಥೆಯ ಸ್ವಂತ ಜಾಗದಲ್ಲಿ ಸದಸ್ಯರ ಅನುಕೂಲಕ್ಕಾಗಿ ಒಳಾಂಗಣ, ಕ್ರೀಡಾಂಗಣ, ಉತ್ತಮ ಕಚೇರಿ, ಮನರಂಜನಾ ಕ್ಲಬ್ ಸ್ಥಾಪಿಸುವ ಯೋಜನೆಗೆ ಪೂರಕವಾದ ಚಿಂತನೆ ಹರಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ನಿಷ್ಠಾವಂತ ಪೊಲೀಸ್ ಅಧಿಕಾರಿ ಅನೂಪ್ ಮಾದಪ್ಪ ಮತ್ತು ಚೇಂಬರ್ ಆಫ್ ಕಾಮರ್ಸ್‍ನ ಏಳಿಗೆಗಾಗಿ ದುಡಿದ ಹಿರಿಯ ಸದಸ್ಯ ವಿ.ಎನ್. ಪ್ರಭಾಕರ್ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಇದೇ ಸಂದರ್ಭ ಚೇಂಬರ್ ಆಫ್ ಕಾಮರ್ಸ್‍ನ ಕುಶಾಲನಗರ ಸ್ಥಾನೀಯ ಸಮಿತಿಯ ನೂತನ ಅಧ್ಯಕ್ಷರಾಗಿ ಅಮೃತ್‍ರಾಜ್ ಅವಿರೋಧವಾಗಿ ಆಯ್ಕೆಯಾದರು.

ಕೊಡಗು ಜಿಲ್ಲಾ ವಾಣಿಜ್ಯೋದ್ಯಮಿಗಳ ಸಹಕಾರ ಸಂಘಕ್ಕೆ ಚೇಂಬರ್ ಆಫ್ ಕಾಮರ್ಸ್ ಕುಶಾಲನಗರ ಚೇಂಬರ್‍ನಿಂದ ಚುನಾವಣೆಯಲ್ಲಿ ಸ್ಪರ್ಧಿಸಿದ ಸದಸ್ಯರಾದ ಬಿ. ರಾಮಕೃಷ್ಣಯ್ಯ, ಜನಾರ್ದನ್ ಪ್ರಭು ಹಾಗೂ ಅಮೃತ್‍ರಾಜ್ ಅವರುಗಳು ಅವಿರೋಧವಾಗಿ ಆಯ್ಕೆಯಾಗಿ ರುವದನ್ನು ಮಹಾಸಭೆ ಅಭಿನಂದನೆ ಸಲ್ಲಿಸಿತು.

ವೇದಿಕೆಯಲ್ಲಿ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್‍ನ ಉಪಾಧ್ಯಕ್ಷ ಬಿ.ಆರ್.ನಾಗೇಂದ್ರಪ್ರಸಾದ್, ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಟ್ರಸ್ಟ್‍ನ ಕೋಶಾಧಿಕಾರಿ ಎಸ್.ಕೆ. ಸತೀಶ್, ಕೇಶವಕಾಮತ್ ಇದ್ದರು. ಮಹಾ ಸಭೆಯಲ್ಲಿ ಕುಶಾಲನಗರ ಚೇಂಬರ್‍ನ ಉಪಾಧ್ಯಕ್ಷರುಗಳಾದ ವಿ.ಪಿ. ನಾಗೇಶ್, ಎಂ.ಕೆ. ದಿನೇಶ್, ಸಹಕಾರ್ಯದರ್ಶಿ ಕೆ.ಎಸ್. ನಾಗೇಶ್, ಕೋಶಾಧಿಕಾರಿ ಅಶ್ವಥ್ ಕುಮಾರ್, ನಿರ್ದೇಶಕರಾದ ಪಿ.ಕೆ. ಜಗದೀಶ್, ಕೆ.ಜೆ. ಸತೀಶ್, ರವಿಕುಮಾರ್, ರವೀಂದ್ರ ರೈ, ಜನಾರ್ಧನ್, ವೆಂಕಟೇಶ್ ಬಾಬು, ಬಶೀರ್, ಕಾಂತಿಲಾಲ್, ಸಂತೋಷ್, ಲೋಕೇಶ್ ಸಾಗರ್, ಪಿ.ಪಿ. ಸತ್ಯನಾರಾಯಣ, ಕೆ.ಎಸ್. ರಾಜಶೇಖರ್ ಮತ್ತಿತರರು ಇದ್ದರು.