ಕುಶಾಲನಗರ, ಮಾ. 13: ಪ್ರಕೃತಿಯನ್ನು ಆರಾಧಿಸುವದರೊಂದಿಗೆ ಬೆಳೆಸಿ ಉಳಿಸಿದಲ್ಲಿ ಮಾತ್ರ ಪರಿಸರದ ಸಮತೋಲನ ಕಾಪಾಡಲು ಸಾಧ್ಯ ಎಂದು ಕೊಡ್ಲಿಪೇಟೆ ಕಿರಿಕೊಡ್ಲಿ ಮಠಾಧೀಶರಾದ ಶ್ರೀ ಸದಾಶಿವ ಸ್ವಾಮೀಜಿ ಕರೆ ನೀಡಿದ್ದಾರೆ. ಕುಶಾಲನಗರದಲ್ಲಿ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಆಶ್ರಯದಲ್ಲಿ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ 63ನೇ ಮಹಾ ಆರತಿ ಕಾರ್ಯಕ್ರಮ ನಡೆಯಿತು.

ಮಳೆಗಾಗಿ ಸಾಮೂಹಿಕ ಪ್ರಾರ್ಥನೆ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಪರಿಸರಕ್ಕೆ ಹಾನಿ ಉಂಟಾಗುತ್ತಿರುವ ಕಾರಣ ವಾತಾವರಣದಲ್ಲಿ ಏರುಪೇರು ಉಂಟಾಗಿ ಮೂಲ ಕಾವೇರಿಯಲ್ಲಿ ಬರದ ಮುನ್ಸೂಚನೆ ಕಂಡುಬರುತ್ತಿದೆ. ಈ ನಿಟ್ಟಿನಲ್ಲಿ ಜೀವನದಿ ಕಾವೇರಿ ಮತ್ತು ಪರಿಸರದ ಉಳಿವಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಕೊಡಗು ಜಿಲ್ಲಾ ಬಿಜೆಪಿಯ ನೂತನ ಅಧ್ಯಕ್ಷ ಬಿ.ಬಿ. ಭಾರತೀಶ್, ನದಿ ಸಂರಕ್ಷಣೆಯ ನಿಟ್ಟಿನಲ್ಲಿ ಪ್ರತಿಯೊಬ್ಬರಲ್ಲಿ ಆಸಕ್ತಿ ಮೂಡ ಬೇಕಾಗಿದೆ. ರಾಜ್ಯ, ಕೇಂದ್ರ ಸರಕಾರಗಳು ವೈಜ್ಞಾನಿಕವಾಗಿ ನದಿಗಳ ರಕ್ಷಣೆಗೆ ಯೋಜನೆಗಳನ್ನು ರೂಪಿಸಬೇಕಾಗಿದೆ ಎಂದರು. ಕುಶಾಲನಗರದ ಕೊಡವ ಸಮಾಜದ ಅಧ್ಯಕ್ಷರಾದ ಮಂಡೇಪಂಡ ಬೋಸ್ ಮೊಣ್ಣಪ್ಪ, ಬಿಜೆಪಿ ತಾಲೂಕು ಅಧ್ಯಕ್ಷÀ ಎಂ.ಎನ್. ಕೊಮಾರಪ್ಪ, ಗಣಪತಿ ದೇವಾಲಯ ಸಮಿತಿ ಅಧ್ಯಕ್ಷ ವಿ.ಎನ್. ವಸಂತ ಕುಮಾರ್ ಅವರುಗಳು ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶ್ರೀರಂಗಪಟ್ಟಣದ ಗಂಜಾಂ ಆದಿಶಂಕರ ಮಠಾಧೀಶರು ಹಾಗೂ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ಸಂಸ್ಥಾಪಕರು ಆಗಿರುವ ಶ್ರೀ ಗಣೇಶ ಸ್ವರೂಪಾನಂದಗಿರಿ ಸ್ವಾಮೀಜಿ ಆಶೀರ್ವಚನ ನೀಡಿ, ಕಾವೇರಿ ನದಿ ತಟದ ಕುಶಾಲನಗರ, ರಾಮನಾಥಪುರ, ಶ್ರೀರಂಗಪಟ್ಟಣ ವ್ಯಾಪ್ತಿಯಲ್ಲಿ ಏಕಕಾಲದಲ್ಲಿ ಕಾವೇರಿಗೆ ಮಹಾ ಆರತಿ ಬೆಳಗುವ ಕಾರ್ಯಕ್ರಮ ನಡೆಯುತ್ತಿರುವದು ಸಂತಸ ಎಂದರು.

63 ತಿಂಗಳುಗಳ ಕಾಲ ಸತತವಾಗಿ ಪ್ರತಿ ಹುಣ್ಣಿಮೆಯಂದು ಕುಶಾಲನಗರದಲ್ಲಿ ಕಾವೇರಿಗೆ ಮಹಾ ಆರತಿ ಬೆಳಗುತ್ತಿರುವದು ಪುಣ್ಯಕಾರ್ಯ ಎಂದರು. ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಪ್ರಮುಖ ಎಂ.ಎನ್. ಚಂದ್ರಮೋಹನ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ಸಂದರ್ಭ ಅರ್ಚಕರ ಸಂಘದ ಅಧ್ಯಕ್ಷ ಪರಮೇಶ್ವರ ಭಟ್ ನೇತೃತ್ವದಲ್ಲಿ ಮಳೆಗಾಗಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಲಾಯಿತು. ನಂತರ ಅಯ್ಯಪ್ಪಸ್ವಾಮಿ ದೇವಾಲಯದ ಅರ್ಚಕರಾದ ಕೃಷ್ಣಮೂರ್ತಿ ಭಟ್ ನೇತೃತ್ವದಲ್ಲಿ ಜೀವನದಿಗೆ 63ನೇ ಮಹಾ ಆರತಿ ಬೆಳಗಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಕಾವೇರಿ ನದಿ ತಟದಲ್ಲಿ ಹಾಗೂ ನದಿ ಭಾಗದಲ್ಲಿ ತ್ಯಾಜ್ಯಗಳನ್ನು ಸ್ವಚ್ಛಗೊಳಿಸಲಾಯಿತು.

ಈ ಸಂದರ್ಭ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಪ್ರಮುಖರಾದ ಡಿ.ಆರ್. ಸೋಮ ಶೇಖರ್, ನೀಲಾ, ಜಗದೀಶ್, ನಿಡ್ಯಮಲೆ ದಿನೇಶ್, ಭಾಸ್ಕರ್ ನಾಯಕ್, ದೇವಾಲಯಗಳ ಒಕ್ಕೂಟದ ಅಧ್ಯಕ್ಷರಾದ ಕೆ.ಆರ್. ಶಿವಾನಂದನ್, ವಿವಿಧ ದೇವಾಲಯಗಳ ಸಮಿತಿ ಅಧ್ಯಕ್ಷರು ಗಳಾದ ಪಿ.ಎನ್. ವಿಜಯೇಂದ್ರ, ಕೆ.ಕೆ. ದಿನೇಶ್, ಸತ್ಯನಾರಾಯಣ, ಶ್ರೀನಿವಾಸರಾವ್, ಹೆಚ್.ಎನ್. ರಾಮಚಂದ್ರ, ಸುಬ್ಬಯ್ಯ, ವಿ.ಆರ್. ಶಿವಶಂಕರ್, ಧರೇಶ್ ಬಾಬು, ಮುನಿಸ್ವಾಮಿ, ಬಿ.ಎಲ್. ಸತ್ಯನಾರಾ ಯಣ, ಧರ್ಮಸ್ಥಳ ಸ್ತ್ರೀಶಕ್ತಿ ಒಕ್ಕೂಟದ ಚಂದ್ರಾವತಿ, ಸಾಹಿತಿ ಫ್ಯಾನ್ಸಿ ಮುತ್ತಣ್ಣ ಮತ್ತಿತರರು ಇದ್ದರು.