ಮಡಿಕೇರಿ, ಮಾ. 14 : ನಗರದ ಜನತೆಯ ಕಳೆದ ಹದಿನೈದು ವರ್ಷಗಳ ಬೇಡಿಕೆಯಾಗಿರುವ ನೂತನ ಖಾಸಗಿ ಬಸ್ ನಿಲ್ದಾಣದ ಯೋಜನೆ ಪ್ರಸ್ತುತ ನಿರ್ಮಾಣ ಹಂತದ ಪ್ರದೇಶದಲ್ಲೇ ಸಾಕಾರಗೊಳ್ಳಲಿದೆ ಎಂದು ನಗರ ಕಾಂಗ್ರೆಸ್ ಸಮಿತಿ ಸ್ಪಷ್ಟಪಡಿಸಿದೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ನಗರಾಧ್ಯಕ್ಷ ಕೆ.ಯು. ಅಬ್ದುಲ್ ರಜಾಕ್, ನೂತನ ಖಾಸಗಿ ಬಸ್ ನಿಲ್ದಾಣ ಮಡಿಕೇರಿ ಜನತೆಯ ಹಲವು ವರ್ಷಗಳ ಬೇಡಿಕೆಯಾಗಿದ್ದು, ಇದೀಗ ಸಾಕಾರಗೊಳ್ಳುತ್ತಿದೆ. ಯೋಜನೆಗೆ ಯಾವದೇ ಅಡ್ಡಿ ಆತಂಕಗಳು ಎದುರಾದರು ಕಾಮಗಾರಿ ಸ್ಥಗಿತಗೊಳ್ಳು ವದಿಲ್ಲವೆಂದು ಸ್ಪಷ್ಟಪಡಿಸಿದರು. ಅಭಿವೃದ್ಧಿ ಕಾರ್ಯಗಳಿಗೆ ಯಾರೂ ವಿರೋಧ ವ್ಯಕ್ತಪಡಿಸಬಾರದೆಂದು ಮನವಿ ಮಾಡಿದ ಅವರು, ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಇಲ್ಲಿಯವರೆಗೆ ನಗರದ ಅಭಿವೃದ್ಧಿ ಕಾರ್ಯಕ್ಕೆ ಏನು ಕೊಡುಗೆ ನೀಡಿದ್ದಾರೆ ಎನ್ನುವದನ್ನು ತಿಳಿಸಲಿ ಎಂದು ಸವಾಲು ಹಾಕಿದರು.

ಈ ಹಿಂದೆ ಶಾಸಕರೇ ಬಸ್ ನಿಲ್ದಾಣ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ್ದಾರೆ. ಆದರೆ, ಇದೀಗ ವಿರೋಧ ವ್ಯಕ್ತಪಡಿಸುತ್ತಿರುವದು ಎಷ್ಟು ಸರಿ ಎಂದು ಅಬ್ದುಲ್ ರಜಾಕ್ ಪ್ರಶ್ನಿಸಿದರು. ನಗರದ ಎಲ್ಲಾ ಬಡಾವಣೆಗಳಲ್ಲಿ ಕಟ್ಟಡ ನಿರ್ಮಿಸುವ ಸಂದರ್ಭ ನೀರು ಕಾಣಿಸಿಕೊಳ್ಳುವದು ಸಾಮಾನ್ಯ. ತಾಂತ್ರಿಕವಾಗಿ ಸಾಕಷ್ಟು ಅಭಿವೃದ್ಧಿ ಕಂಡಿರುವದರಿಂದ ಯಾವದೇ ಅಡಚಣೆ ಇಲ್ಲದೆ ಖಾಸಗಿ ಬಸ್ ನಿಲ್ದಾಣ ನಿರ್ಮಾಣವಾಗಲಿದೆ ಎಂದು ಅವರು ತಿಳಿಸಿದರು.

ನಗರಸಭೆಯ ಹಿರಿಯ ಸದಸ್ಯ ಹೆಚ್.ಎಂ. ನಂದಕುಮಾರ್ ಮಾತನಾಡಿ, ಇತ್ತೀಚೆಗೆ ಶಾಸಕರ ನೇತೃತ್ವದಲ್ಲಿ ನಡೆದ ಸಭೆÉಗೆ ಯಾವದೇ ಮಾನ್ಯತೆ ಇಲ್ಲವೆಂದು ಅಭಿಪ್ರಾಯಪಟ್ಟರು. ನಗರಸಭೆಯ ಸಭೆÉ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ನಡೆಯಬೇಕೆÉೀ ಹೊರತು ಶಾಸಕರ ಅಧ್ಯಕ್ಷತೆಯಲ್ಲಿ ನಡೆದರೆ ಆ ಸಭೆಯ ತೀರ್ಮಾನಗಳು ಸಿಂಧುವಾಗುವದಿಲ್ಲ ವೆಂದರು. ಖಾಸಗಿ ಬಸ್ ನಿಲ್ದಾಣ ನಿರ್ಮಾಣದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲವೆಂದ ಅವರು, ತಾಂತ್ರಿಕ ವರದಿ ಬಂದ ತಕ್ಷಣ ಮತ್ತೆ ಕಾಮಗಾರಿ ಆರಂಭವಾಗಲಿದೆ ಎಂದರು.

ಸ್ಥಾಯಿ ಸಮಿತಿ ಅಧ್ಯಕ್ಷ ಕೆಎಸ್. ರಮೇಶ್ ಅವರು, ಬಸ್ ನಿಲ್ದಾಣದ ಕಾಮಗಾರಿ ಪರಿಶೀಲಿಸಿ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವಂತೆ ಸೂಚನೆ ನೀಡಿದ್ದರು. ಇದಾದ ಕೆಲವೇ ದಿನಗಳಲ್ಲಿ ಈ ಜಾಗ ಸೂಕ್ತವಲ್ಲವೆಂದು ಹೇಳಿಕೆ ನೀಡಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ರಮೇಶ್ ಅವರು ಈ ರೀತಿ ಗೊಂದಲ ಸೃಷ್ಟಿಸಬಾರದೆಂದು ನಂದ ಕುಮಾರ್ ಒತ್ತಾಯಿಸಿದರು.

ಸಮುದ್ರದಲ್ಲೇ ಕಟ್ಟಡ ಕಟ್ಟುತ್ತಾರೆ

ಮುಡಾ ಅಧ್ಯಕ್ಷ ಚುಮ್ಮಿದೇವಯ್ಯ ಮಾತನಾಡಿ, ಬಸ್ ಮಾರ್ಗದ ಬಗ್ಗೆ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವದೆಂದರು. ರಾಜಾ ಸೀಟಿನ ರಸ್ತೆ ಬದಿಯಲ್ಲಿ ವಾಹನ ಗಳನ್ನು ನಿಲುಗಡೆ ಗೊಳಿಸದಂತೆ ಕ್ರಮ ಕೈಗೊಂಡು ತೋಟಗಾರಿಕಾ ಇಲಾಖೆಗೆ ಸಂಬಂಧಿಸಿದ ಕೆರೆ ಜಾಗದ ವ್ಯಾಪ್ತಿಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು ಚಿಂತನೆ ನಡೆಸಲಾಗಿದೆ ಎಂದರು. ಇಂದಿನ ತಾಂತ್ರಿಕ ಯುಗದಲ್ಲಿ ಸಮುದ್ರದಲ್ಲೇ ಕಟ್ಟಡ ಕಟ್ಟಬಹುದಾಗಿದ್ದು, 5 ಅಡಿಯಷ್ಟು ನೀರಿರುವ ಪ್ರದೇಶದಲ್ಲಿ ಬಸ್ ನಿಲ್ದಾಣ ನಿರ್ಮಿಸಲು ಯಾವದೇ ಅಡ್ಡಿ ಇಲ್ಲವೆಂದು ಚುಮ್ಮಿ ದೇವಯ್ಯ ಅಭಿಪ್ರಾಯಪಟ್ಟರು.

ಕೈಗಾರಿಕಾ ಬಡಾವಣೆಯ ಸಮೀಪ ಸಿಪಿಸಿ ಗ್ಯಾರೇಜ್ ವ್ಯಾಪ್ತಿಯಲ್ಲಿ ನಗರಸಭೆÉಗೆ ಸೇರಿದ ಅರ್ಧ ಎಕರೆಯಷ್ಟು ಜಾಗವಿದ್ದು ಇಲ್ಲಿ ಪಾರ್ಕಿಂಗ್ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗುವದೆಂದು ಎ.ಸಿ. ಚುಮ್ಮಿ ದೇವಯ್ಯ ಸ್ಪಷ್ಟಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ನಗರಸಭಾ ಸದಸ್ಯರುಗಳಾದ ಪ್ರಕಾಶ್ ಆಚಾರ್ಯ, ವೆಂಕಟೇಶ್ ಹಾಗೂ ಉದಯ ಉಪಸ್ಥಿತರಿದ್ದರು.