ಸೋಮವಾರಪೇಟೆ, ಮಾ. 15: ನಿನ್ನೆ ಸಂಜೆ ಸುರಿದ ಭಾರೀ ಮಳೆ ಸಂದರ್ಭ ಸಿಡಿಲು ಬಡಿದು ವಾಸದ ಮನೆಯೊಂದು ಭಾಗಶಃ ಜಖಂಗೊಂಡಿರುವ ಘಟನೆ ಸಮೀಪದ ಹರಪಳ್ಳಿ ಗ್ರಾಮದಲ್ಲಿ ನಡೆದಿದ್ದು, ಅದೃಷ್ಟವಶಾತ್ ಮನೆ ಮಂದಿ ಜೀವಾಪಾಯದಿಂದ ಪಾರಾಗಿದ್ದಾರೆ.ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿಯ ಹರಪಳ್ಳಿ ಗ್ರಾಮದ ಯಶೋಧ ಎಂಬವರ ಮನೆಯ ಮುಂಭಾಗವಿದ್ದ ತೆಂಗಿನ ಮರ ಹಾಗೂ ಮನೆಗೆ ಸಿಡಿಲು ಬಡಿದಿದ್ದು, ಮನೆಯೊಳಗಿದ್ದ ಎಲೆಕ್ಟ್ರಾನಿಕ್ ವಸ್ತುಗಳು, ವಿದ್ಯುತ್ ತಂತಿಗಳು, ಮೀಟರ್ ಬೋರ್ಡ್ ಸುಟ್ಟುಹೋಗಿವೆ. ಇದರೊಂದಿಗೆ ಮನೆಯ ಗೋಡೆ ಬಿರುಕುಬಿಟ್ಟಿದ್ದು, 500ಕ್ಕೂ ಅಧಿಕ ಹೆಂಚುಗಳು ಒಡೆದು ಹೋಗಿವೆ.

ಯಶೋಧ ಮತ್ತು ಅವರ ಪುತ್ರ ರವಿ ಮನೆಯ ಹೊರಭಾಗ ವಿದ್ದುದರಿಂದ ಹೆಚ್ಚಿನ ಅನಾಹುತ ತಪ್ಪಿದೆ. ಸ್ಥಳಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾರತಿ ಉಮೇಶ್, ಸದಸ್ಯ ರೆಜಿತ್, ಕೆ.ಇ.ಬಿ. ಸಿಬ್ಬಂದಿ, ಗ್ರಾಮಲೆಕ್ಕಿಗ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.