ಗೋಣಿಕೊಪ್ಪಲು, ಮಾ. 16: ವಿಕಲಚೇತನರಿಗೆ ಸರಕಾರದಿಂದ ಅಂಗವಿಕಲ ಚೀಟಿ ನೀಡುವ ಉದ್ದೇಶದಿಂದ ಬಿ.ಜೆ.ಪಿ. ವೈದ್ಯಕೀಯ ಪ್ರಕೋಷ್ಠದ ವತಿಯಿಂದ ವಿಕಲಚೇತ ನರಿಗೆ ವೈದ್ಯಕೀಯ ತಪಾಸಣಾ ಶಿಬಿರ ತಾ. 19 ರಂದು ಗೋಣಿಕೊಪ್ಪದ ಆರ್.ಎಂ.ಸಿ. ಸಭಾಂಗಣದಲ್ಲಿ ನಡೆಯಲಿದೆ.

ಅಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ನಡೆಯುವ ಶಿಬಿರದಲ್ಲಿ ಮೂಳೆ, ಮಾನಸಿಕ, ಫಿಸಿಶಿಯನ್, ನೇತ್ರ ಹಾಗೂ ಇಎನ್‍ಟಿ ತಜ್ಞರು ತಪಾಸಣೆ ನಡೆಸುವ ಮೂಲಕ ವಿಕಲತೆ ಬಗ್ಗೆ ದಾಖಲಾತಿ ನೀಡುತ್ತಾರೆ. ಇದರಂತೆ ಅಂಗವಿಕಲತೆ ಆಧಾರದಲ್ಲಿ ಅಂಗವಿಕಲ ಚೀಟಿ ವಿತರಿಸಲು ಯೋಜನೆ ರೂಪಿಸಲಾಗಿದೆ.

ಜಿಲ್ಲೆಯ ಬಹುತೇಕ ವಿಕಲಚೇತನರಿಗೆ ಒಂದೇ ಕಡೆ ತಜ್ಞ ವೈದ್ಯರು ಸಿಗದೆ ಅಂಗವಿಕಲತೆ ಬಗ್ಗೆ ಚೀಟಿ ಪಡೆಯಲು ಸಾಧ್ಯವಾಗುತ್ತಿಲ್ಲ. ಜಿಲ್ಲಾ ಕೇಂದ್ರಕ್ಕೆ ಬಂದು ದಾಖಲಾತಿ ಮಾಡಿಸಲು ವೈಕಲ್ಯತೆ ತೊಂದರೆ ಯಾಗಿದೆ. ದಕ್ಷಿಣ ಕೊಡಗಿನಲ್ಲಿ ಗಿರಿಜನರು ಹೆಚ್ಚಿರುವದರಿಂದ ಅವರಿಗೆ ಸವಲತ್ತು ನೀಡುವ ಉದ್ದೇಶದಿಂದ ಯೋಜನೆ ರೂಪಿಸಲಾಗಿದೆ.

ವಿಕಲಚೇತನರು ಬರುವಾಗ ಜೊತೆಯಲ್ಲಿ ಒಬ್ಬ ಸಹಾಯಕರನ್ನು ಕರೆ ತರಬೇಕು. ವಾಸ ಗುರುತಿನ ಚೀಟಿ, 3 ಪಾಸ್‍ಪೋರ್ಟ್ ಭಾವಚಿತ್ರ, ಬ್ಯಾಂಕ್ ಖಾತೆ ಸಂಖ್ಯೆಯ ಜೆರಾಕ್ಸ್ ಪ್ರತಿ ತರಬೇಕಾಗಿದೆ ಎಂದು ಕುಂಞಂಗಡ ಅರುಣ್ ಭೀಮಯ್ಯ ಹಾಗೂ ಜಿ.ಪಂ. ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಮೂಕೊಂಡ ಶಶಿ ಸುಬ್ರಮಣಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗೆ 9844315191, 9448582462, 9448933287 ಸಂಖ್ಯೆಯಲ್ಲಿ ಸಂಪರ್ಕಿಸಬಹುದಾಗಿದೆ.