ಮಡಿಕೇರಿ, ಮಾ. 29: ವಿದ್ಯಾರ್ಥಿಗಳು ಸ್ವತಂತ್ರ ವ್ಯಕ್ತಿತ್ವ ಬೆಳೆಸಿಕೊಂಡು ಅಭಿವೃದ್ಧಿಯತ್ತ ಮುಂದುವರಿಯಬೇಕು. ಸಮಾಜದಲ್ಲಿ ಶ್ರೇಷ್ಠ ವ್ಯಕ್ತಿಯಾಗಿ, ಸಮಾಜಕ್ಕೆ ತನ್ನದೇ ಆದ ಕೊಡುಗೆ ಮತ್ತು ಸೇವೆ ನೀಡಬೇಕು ಎಂದು ಆಲೂರು-ಸಿದ್ದಾಪುರ ಸರ್ಕಾರಿ ಪದವಿಪೂರ್ವ ಕಾಲೇಜಿನ ಆಂಗ್ಲ ಭಾಷಾ ಉಪನ್ಯಾಸಕ ಜಿ.ಟಿ. ಗಣಪತಿ ಭಟ್ ಹೇಳಿದರು.

ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ವಾರ್ಷಿಕೊತ್ಸವ ಸಮಾರಂಭ ಮತ್ತು ದಶ ಸಂಗಮ ಸಂಭ್ರಮ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಶಿಕ್ಷಣವೆಂಬದು ದೇವಾಲಯದಂತೆ, ವ್ಯಕ್ತಿತ್ವ ದೊಡ್ಡದಿದ್ದಾಗ ಕಲ್ಲಿನಲ್ಲೂ ದೇವರನ್ನು ಕಾಣಬಹುದು. ಶಿಕ್ಷಣದಿಂದ ವ್ಯಕ್ತಿತ್ವ ಅಭಿವೃದ್ಧಿ ಸಾಧ್ಯ. ದೋಷವೆಂಬದು ನಮ್ಮ ಅಂತರಾಳದಲ್ಲಿಯೇ ಇರುತ್ತದೆ. ಅದನ್ನು ಸರಿಪಡಿಸಿಕೊಂಡು ಮುಂದೆ ಸಾಗಬೇಕಾಗುತ್ತದೆ. ಜೀವನದಲ್ಲಿ ಬದ್ಧತೆ, ನೈತಿಕತೆ, ಶ್ರಮ, ತಾಳ್ಮೆ ಜೊತೆಗೆ ಸಾಮಾನ್ಯ ಜ್ಞಾನವಿದ್ದಾಗ ಎಂತಹ ಕಠಿಣ ಪರಿಸ್ಥಿತಿಯಲ್ಲೂ ಜಯಗಳಿಸ ಬಹುದು ಎಂದರು. ಬದುಕಿನ ಯಾವದೇ ಪರಿಸ್ಥಿತಿಯಲ್ಲಿ ಎಲ್ಲಿಯೂ ಎದೆಗುಂದದೇ ಮುಂದೆ ಸಾಗಬೇಕು. ಯಶಸ್ಸಿಗಾಗಿ ಸದಾ ಪ್ರಯತ್ನ ಪಡಬೇಕು ಎಂದು ಉಪನ್ಯಾಸ ಜಿ.ಟಿ. ಗಣಪತಿ ಭಟ್ ಹೇಳಿದರು.

ಕಾಲೇಜಿನ ಪ್ರಾಂಶುಪಾಲೆ ಪ್ರೊ. ಚಿತ್ರಾ ವೈ, ನಗರದ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ದಯಾನಂದ ಇತರರು ಇದ್ದರು. ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಅಂತಿಮ ಬಿ.ಬಿ.ಎಂ ವಿದ್ಯಾರ್ಥಿನಿ ಶ್ವೇತ ಪ್ರಾರ್ಥಿಸಿದರು. ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಕುಸುಮ ಸ್ವಾಗತಿಸಿದರು. ಕಾಲೇಜಿನ ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕ ಶಶಿಧರ್ ವರದಿ ವಾಚಿಸಿದರು.