ಸಿದ್ದಾಪುರ, ಮಾ. 31: ಸಿದ್ದಾಪುರ ಗ್ರಾಮ ಪಂಚಾಯಿತಿಯ ವ್ಯಾಪ್ತಿಗೆ ಒಳಪಡುವ ಕರಡಿಗೋಡು ಗ್ರಾಮದ ಅವರೆಗುಂದದಲ್ಲಿ ಏಪ್ರಿಲ್ 3 ರಂದು ಬುಡಕಟ್ಟು ಅರಣ್ಯ ಹಕ್ಕು ಸಮಿತಿ ವತಿಯಿಂದ ಗ್ರಾಮ ಸಭೆ ನಡೆಯಲಿದೆ ಎಂದು ಬುಡಕಟ್ಟು ಅರಣ್ಯ ಹಕ್ಕು ಸಮಿತಿಯ ಅಧ್ಯಕ್ಷ ಎಂ.ಸಿ. ವಾಸು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು. ಅವರೆಗುಂದ ಅಂಗನವಾಡಿ ಸಮೀಪವಿರುವ ಸಮುದಾಯ ಭವನದಲ್ಲಿ ಪೂರ್ವಾಹ್ನ 11.30ಕ್ಕೆ ಗ್ರಾಮ ಸಭೆಯು ಬುಡಕಟ್ಟು ಅರಣ್ಯ ಹಕ್ಕು ಸಮಿತಿಯ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಸಭೆಯಲ್ಲಿ ಕಳೆದ ಬಾರಿಯ ಗ್ರಾಮ ಸಭೆಗೆ ಚರ್ಚಿಸಿದ ವಿಷಯ ಕಾರ್ಯಗತವಾಗದಿರುವ ಕುರಿತು ಹಾಗೂ ಸಮುದಾಯ ಹಕ್ಕು ಹಾಗೂ ಅರಣ್ಯ ಪ್ರದೇಶದಲ್ಲಿ ವಾಸಿಸುವ ಮಂದಿಗೆ ಹಕ್ಕು ಪತ್ರ ಲಭಿಸದಿರುವ ಬಗ್ಗೆ ಜಾತಿ ದೃಢೀಕರಣ ಪತ್ರ, ವೈಯಕ್ತಿಕ ಹಕ್ಕುಗಳ ಕುರಿತು ರಸ್ತೆ, ಕುಡಿಯುವ ನೀರು, ಮನೆ ನಿರ್ಮಾಣ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕುರಿತು, ಇತರ ಮೂಲಭೂತ ಸೌಕರ್ಯಗಳ ಬಗ್ಗೆ, ಗ್ರಾಮದಲ್ಲಿ ವನ್ಯ ಪ್ರಾಣಿಗಳ ಉಪಟಳದ ಬಗ್ಗೆ ಮತ್ತು ಕೃಷಿಕರಿಗೆ ಕೃಷಿ ಇಲಾಖೆಯಿಂದ ಸಿಗಬೇಕಾದ ಸೌಲಭ್ಯಗಳ ಬಗ್ಗೆ ಚರ್ಚಿಸಲಾಗುವದೆಂದರು. ಸಭೆಯಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆಂದು ಮಾಹಿತಿ ನೀಡಿದರು.