ನಾಪೆÇೀಕ್ಲು, ಏ. 1: ಸುಮಾರು 250 ವರ್ಷಗಳ ಹಿಂದೆ ಪಾಳು ಬಿದ್ದಿದ್ದ ದೇವಾಲಯವೊಂದು ಭಕ್ತಾದಿಗಳ ಧನ ಸಹಾಯ ಮತ್ತು ಶತತ ಪ್ರಯತ್ನದ ಫಲವಾಗಿ ಸುಂದರವಾಗಿ ರೂಪುಗೊಂಡಿದೆ. ಕಕ್ಕಬ್ಬೆ - ನೆಲಜಿ ರಸ್ತೆಯ ಕುಂಜಿಲ ಗ್ರಾಮದಲ್ಲಿ ಕಂಡು ಬರುವದೇ ಈ ದೇವಾಲಯ. ಕುಂಜಿಲ ಗ್ರಾಮದ ಮೂರು ಕೇರಿ ಮತ್ತು ಸಮೀಪದ ನಾಲಡಿ ಗ್ರಾಮದ ಒಂದು ಕೇರಿಯ ಜನ ಸೇರಿ ಈ ದೇವಾಲಯವನ್ನು ನಡೆಸಿಕೊಂಡು ಬರುತ್ತಿರುವದರಿಂದ ಇದಕ್ಕೆ ನಾಲ್ಕೇರಿ ಶ್ರೀ ಭಗವತಿ ದೇವಾಲಯ ಎಂಬ ಹೆಸರು.

ಸುಮಾರು 250 ವರ್ಷಗಳ ಹಿಂದೆ ಈ ದೇವಸ್ಥಾನದಲ್ಲಿ ನಿತ್ಯ ಪೂಜೆ ಮತ್ತು ಉತ್ಸವಾದಿಗಳು ನಡೆಯುತಿತ್ತು. ಕಾರಣಾಂತರದಿಂದ ದೇವರ ವಾರ್ಷಿಕ ಹಬ್ಬ ನಿಂತುಹೋಗಿ ಶ್ರೀ ಭಗವತಿ ದೇವರ ಉತ್ಸವ ಮೂರ್ತಿಯನ್ನು ಶ್ರೀ ಪಾಡಿ ಇಗ್ಗುತ್ತಪ್ಪ ದೇವಸ್ಥಾನಕ್ಕೆ ಸ್ಥಳಾಂತರಿಸಿದ ಸಂದರ್ಭದಲ್ಲಿ ಅರ್ಚಕರು ಶ್ರೀ ದೇವಿಯ ಮೂರ್ತಿಯನ್ನು ಇಗ್ಗುತ್ತಪ್ಪ ದೇವಸ್ಥಾನದಲ್ಲಿಯೇ ಇರಿಸಿದರೆಂಬದು ಪ್ರತೀತಿ.

ಆಗ ಇಗ್ಗುತ್ತಪ್ಪ ದೇವಾಲಯದ ಆಡಳಿತವನ್ನು ಗ್ರಾಮಸ್ಥರು ನಡೆಸುತ್ತಿದ್ದರಿಂದ ದೇವಿಯ ವಿಗ್ರಹವನ್ನು ಅಲ್ಲಿಯೇ ಇರಿಸಿ ಪೂಜಿಸಲಾಯಿತು. ಅನಂತರ ಈ ದೇವಾಲಯ ಪೂರ್ತಿಯಾಗಿ ಕಾಡುಪಾಲಾಯಿತು. 1996ರಲ್ಲಿ ಶ್ರೀ ಇಗ್ಗುತ್ತಪ್ಪ ದೇವಳದಲ್ಲಿ ಅಷ್ಟಬಂಧ ಬ್ರಹ್ಮಕಲಶ ನೆರವೇರಿಸುವ ಸಂದರ್ಭದಲ್ಲಿ ಭಗವತಿ ದೇವಿಯ ಮೂರ್ತಿಯನ್ನು ಹೊರಗಿಡಲಾಯಿತು. ಅದಾಗಲೇ ಭಗವತಿ ದೇವಸ್ಥಾನ ಪಾಳು ಬಿದ್ದ ಸ್ಥಳದಲ್ಲಿ ಬೃಹತ್ ವೃಕ್ಷಗಳು ಬೆಳೆದು ನಿಂತು ದೇವಸ್ಥಾನ ಇದ್ದುದಕ್ಕೆ ಕುರುಹು ಮಾತ್ರ ಇತ್ತು. ಆಗ ಗ್ರಾಮದ ಹಿರಿಯರಾದ ಕೆ.ಕೆ.ಮುತ್ತಪ್ಪ ದೇವಾಲಯ ನಿರ್ಮಾಣಕ್ಕೆ ಹೆಚ್ಚಿನ ಆಸಕ್ತಿ ವಹಿಸಿ ತಕ್ಕ ಮುಖ್ಯಸ್ಥರನ್ನು, ಗ್ರಾಮಸ್ಥರನ್ನು ಒಗ್ಗೂಡಿಸಿ ದೇವಾಲಯದ ಪುನರ್ ನಿರ್ಮಾಣಕ್ಕೆ ಚಾಲನೆ ನೀಡಿದರು. ಹಣಕಾಸಿನ ತೊಂದರೆಯಿಂದ ಹಲವು ಏಳು ಬೀಳುಗಳ ನಡುವೆ 2010ರ ಮೇ ತಿಂಗಳಲ್ಲಿ ದೇವಿಯ ಪ್ರತಿಷ್ಠಾಪನಾ ಮಹೋತ್ಸವವನ್ನು ನೆರವೇರಿಸಲಾಯಿತು. ಆದರೆ ದೇವಳದ ಪೌಳಿ ಮತ್ತಿತರ ಕೆಲಸಗಳು ಹಾಗೇ ಉಳಿದಿದ್ದವು. ಆನಂತರದ ನಾಲ್ಕು ವರ್ಷಗಳ ಗ್ರಾಮಸ್ಥರ ಶ್ರಮ ಮತ್ತು ದಾನಿಗಳ ಸಹಾಯದಿಂದ ಇದೀಗ ವಿಶಾಲವಾದ ಸುಂದರ ದೇವಾಲಯ ನಿರ್ಮಾಣಗೊಂಡಿದೆ.

ಈ ದೇವಾಲಯವು ಕೇರಳ ಶೈಲಿಯ ವಾಸ್ತು ಶಿಲ್ಪವನ್ನು ಒಳಗೊಂಡಿದೆ. ಗರ್ಭಗುಡಿ. ಅದಕ್ಕೆ ತಕ್ಕ ತೀರ್ಥ ಮಂಟಪ, ವಿಶಾಲವಾದ ಒಳ ಮತ್ತು ಹೊರಾಂಗಣ ಹೊಂದಿದೆ. ದೇವಾಲಯ ನಿರ್ಮಾಣಕ್ಕೆ ಈಗಾಗಲೇ ಸುಮಾರು ರೂ. 25 ಲಕ್ಷ ವೆಚ್ಚವಾಗಿದೆ. ಅದರಲ್ಲಿ ಮುಜುರಾಯಿ ಇಲಾಖೆಯಿಂದ 50 ಸಾವಿರ ರೂ. ಸಮುದಾಯ ಭವನ ನಿರ್ಮಾಣಕ್ಕೆ ಸಂಸದರ ನಿಧಿಯಿಂದ ರೂ. 2.50 ಲಕ್ಷ ಹಾಗೂ ಶಾಸಕರ ನಿಧಿಯಿಂದ ರೂ. 1 ಲಕ್ಷ ಮಾತ್ರ ಲಭಿಸಿದೆ. ಉಳಿದಂತೆ ದಾನಿಗಳು, ಗ್ರಾಮಸ್ಥರ ವಂತಿಗೆ ಸಂಗ್ರಹಿಸಲಾಗಿದೆ. ಇನ್ನೂ ಹೊರಾಂಗಣದ ಕಲ್ಲು ಹಾಸಿನ ಕೆಲಸ, ತಡೆ ಗೋಡೆ ಕಾಮಗಾರಿ ಬಾಕಿಯಿದ್ದು ಸುಮಾರು 5 ಲಕ್ಷ ರೂ. ವೆಚ್ಚವಾಗಬಹುದೆಂದು ಅಂದಾಜಿಸಲಾಗಿದೆ. ಇದಕ್ಕೆ ನಾಡಿನ ಜನರ ಸಹಾಯ ಹಸ್ತವನ್ನು ನಿರೀಕ್ಷಿಸಲಾಗಿದೆ ಎಂದು ದೇವಳದ ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ‘ಶಕ್ತಿ’ ಗೆ ತಿಳಿಸಿದ್ದಾರೆ. ಈ ವಿಭಾಗದಲ್ಲಿ ಅತ್ಯುತ್ತಮ ದೇವಳಗಳ ಪಟ್ಟಿಯಲ್ಲಿ ಇದು ಸೇರ್ಪಡೆಗೊಳ್ಳುವದರಲ್ಲಿ ಎರಡು ಮಾತಿಲ್ಲ.

- ಪಿ.ವಿ. ಪ್ರಭಾಕರ್