ಮಡಿಕೇರಿ, ಏ. 1: ಜಿಲ್ಲೆಯ ಜನಾರ್ಧನ ಹಳ್ಳಿ, ಮಾವಿನ ಹಳ್ಳಿ, ಹೊನ್ನೆಕೋಡಿ ಹಾಗೂ ಹಿಪ್ಪಗಳಲೆ ಶೀತಪೀಡಿತ ಪ್ರದೇಶಗಳಲ್ಲಿ ಮೂಲಸೌಲಭ್ಯ ಕಲ್ಪಿಸುವ ಸಂಬಂಧ ವಿಧಾನಸಭೆಯ ಭರವಸೆ ಸಮಿತಿ ಹಲವು ಶಿಫಾರಸ್ಸು ಮಾಡಿರುವಂತೆ ಕಾರ್ಯಕ್ರಮಗಳನ್ನು ಅನುಷ್ಠಾನ ಗೊಳಿಸುವ ಬಗ್ಗೆ ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಅವರ ಅಧ್ಯಕ್ಷತೆಯಲ್ಲಿ ಹಾಗೂ ಜಿ.ಪಂ. ಸಿಇಓ ಚಾರುಲತಾ ಸೋಮಲ್ ಅವರ ಉಪಸ್ಥಿತಿಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಯಿತು. ಹಾರಂಗಿ ಮತ್ತು ಹೇಮಾವತಿ ಹಿನ್ನೀರಿನ ಜಲಾಶಯದಿಂದ ಸೋಮವಾರಪೇಟೆ ತಾಲೂಕಿನ ಶೀತಪೀಡಿತ ಪ್ರದೇಶಗಳಿಗೆ ಇತ್ತೀಚೆಗೆ ವಿಧಾನಸಭೆಯ ಭರವಸೆ ಸಮಿತಿ ಭೇಟಿ ನೀಡಿ, ಶೀತಪೀಡಿತ ಪ್ರದೇಶಗಳ ಸ್ಥಳ ಪರಿವೀಕ್ಷಣೆ ಮಾಡಿ, ವಿಧಾನಸಭೆಯಲ್ಲಿ ವಿಶೇಷ ವರದಿ ಮಂಡಿಸಿದ್ದು, ಸಮಿತಿಯು ಹಲವು ಶಿಫಾರಸು ಮಾಡಿರುವ ಹಿನ್ನೆಲೆ ಕಾರ್ಯಕ್ರಮ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗುವಂತೆ ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಕಂದಾಯ ಇಲಾಖೆ ವತಿಯಿಂದ 94ಸಿ ಯಡಿ ಹಕ್ಕುಪತ್ರ ವಿತರಣೆ ಮಾಡಲು ಅಗತ್ಯ ಕ್ರಮ ಕೈಗೊಳ್ಳುವದು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ರಸ್ತೆ ಅಗಲೀಕರಣ ಮಾಡಿ ಬಸ್ ಸೌಕರ್ಯ ಕಲ್ಪಿಸಲು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು.

ಸೋಮವಾರಪೇಟೆ ತಾಲೂಕಿನ ಹಾರಂಗಿ ಮತ್ತು ಹೇಮಾವತಿ ಜಲಾಶಯದಿಂದ ಶೀತಪೀಡಿತವಾದ ಪ್ರದೇಶಗಳ ಸುತ್ತಮುತ್ತಲಿನ ಗ್ರಾಮಗಳಾದ ಜನಾರ್ಧನ ಹಳ್ಳಿ, ಮಾವಿನ ಹಳ್ಳಿ, ಹೊನ್ನೆಕೋಡಿ ಹಾಗೂ ಹಿಪ್ಪಗಳಲೆ ಗ್ರಾಮಗಳಿಗೆ ತಹಶೀಲ್ದಾರರು, ತಾ.ಪಂ.ಇಒ ಮತ್ತು ನೀರಾವರಿ ನಿಗಮದ ಅಧಿಕಾರಿಗಳು ಮತ್ತೊಮ್ಮೆ ಭೇಟಿ ನೀಡಿ ಯಾವ ಕೆಲಸಗಳು ಆಗಿವೆ ಮತ್ತು ಆಗಬೇಕು ಎಂಬ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ನಿರ್ದೇಶನ ನೀಡಿದರು.

ಕುಡಿಯುವ ನೀರು, ರುದ್ರಭೂಮಿ, ಸೋಲಾರ್ ದೀಪ, ವಿದ್ಯುತ್ ಸಂಪರ್ಕ ಕಲ್ಪಿಸುವದು ಮತ್ತಿತರ ಮೂಲ ಸೌಲಭ್ಯಕ್ಕೆ ಆದ್ಯತೆ ನೀಡಿ ಶೀಘ್ರ ಮಾಹಿತಿ ಒದಗಿಸುವಂತೆ ಸೂಚನೆ ನೀಡಿದರು.

ಜಿ.ಪಂ.ಸಿಇಓ ಚಾರುಲತಾ ಸೋಮಲ್ ಅವರು ಶೀತಪೀಡಿತ ಪ್ರದೇಶಗಳಿಗೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಕ್ರಮಕೈಗೊಳ್ಳುವಂತೆ ಅವರು ಸೂಚಿಸಿದರು.

ತಹಶೀಲ್ದಾರ್ ಕೃಷ್ಣ ಮಾತನಾಡಿ ಐದು ಗ್ರಾಮಗಳಿಂದ 94ಸಿ ಯಡಿ 60 ಅರ್ಜಿಗಳು ಸಲ್ಲಿಕೆಯಾಗಿದ್ದು, ಜಮಾಬಂದಿ ಪರಿಶೀಲಿಸಿ ಶೀಘ್ರ ವರದಿ ಸಲ್ಲಿಸಲಾಗುವದು ಎಂದರು.

ಉಪ ವಿಭಾಗಾಧಿಕಾರಿ ಡಾ. ನಂಜುಂಡೇಗೌಡ, ಪ್ರಾದೇಶಿಕ ಸಾರಿಗೆ ಅಧಿಕಾರಿ ಡಿಸೋಜ, ಸೆಸ್ಕ್ ಸಹಾಯಕ ಕಾರ್ಯಪಾಲಕ ಎಂಜಿನಿಯರ್, ಕೆ.ಎಸ್.ಆರ್.ಟಿ.ಸಿ ಘಟಕದ ವ್ಯವಸ್ಥಾಪಕರು, ಅರಣ್ಯ ಇಲಾಖೆ ಅಧಿಕಾರಿಗಳು ಮತ್ತಿತರರು ಇದ್ದರು.