ಆಲೂರುಸಿದ್ದಾಪುರ/ಶನಿವಾರಸಂತೆ, ಏ. 2: ಆಟವಾಡುತ್ತಿದ್ದ ಮಗುವಿನ ಮೇಲೆ ಮನೆಗೆ ನಿರ್ಮಿಸಿದ್ದ ತಡೆಗೋಡೆಯೇ ಜವರಾಯನಾಗಿ ಬಂದು ಮಗುವಿನ ಪ್ರಾಣವನ್ನು ಬಲಿ ಪಡೆದ ದುರ್ಘಟನೆ ಶನಿವಾರಸಂತೆ ಸಮೀಪದ ಸುಳುಗಳಲೆ ಕಾಲೋನಿಯಲ್ಲಿ ಇಂದು ನಡೆದಿದೆ. ಆರು ವರ್ಷದ ಚರಣ್ ಎಂಬ ಬಾಲಕ ಸಾವನ್ನಪ್ಪಿದ ದುರ್ದೈವಿ.

ಅಲ್ಲಿಯ ನಿವಾಸಿ ಪ್ರವೀಣ್ ಹಾಗೂ ಜ್ಯೋತಿ ದಂಪತಿಗೆ ಸುಮಾರು ಆರು ವರ್ಷದ ಅವಳಿ ಮಕ್ಕಳಿದ್ದು ಭಾನುವಾರ ಮಧ್ಯಾಹ್ನ ಎಂದಿನಂತೆ ತಮ್ಮ ಅಜ್ಜಿ ಅವಳಿ ಮಕ್ಕಳಿಗೆ ಮನೆಯ ಒಳಗಡೆ ಊಟ ಮಾಡಿಸುತ್ತಿದ್ದಾಗ, ಇವರ ಮನೆ ಮುಂಭಾಗದಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಮನೆಗೆ ಕಲ್ಲಿನ ಪುಡಿಯನ್ನು ತಂದ ಟ್ರ್ಯಾಕ್ಟರ್ ಶಬ್ದ ಕೇಳಿದೆ. ಅದನ್ನು ನೋಡಲು ಆರು ವರ್ಷದ ಚರಣ್ ಮನೆಯಿಂದ ಹೊರ ಬಂದು ತಮ್ಮ ಮನೆಯ ತಡೆಗೋಡೆಯ ಬದಿಯಲ್ಲಿ ನಿಂತಿದ್ದಾನೆ. ಆದರೆ ವಿಧಿಯಾಟವೇ ಬೇರೆಯಾಗಿತ್ತು. ಟ್ರ್ಯಾಕ್ಟರ್ ಚಾಲಕನ ನಿಯಂತ್ರಣ ತಪ್ಪಿ ತಡೆಗೋಡೆಗೆ ಅಪ್ಪಳಿಸಿದೆ. ಈ ವೇಳೆ ಮಗುವಿನ ಮೇಲೆ ತಡೆ ಗೋಡೆ ಸಂಪೂರ್ಣ ಬಿದ್ದಿದ್ದು, ತಕ್ಷಣ ಅಕ್ಕಪಕ್ಕದವರು ಮಗುವನ್ನು ಶನಿವಾರಸಂತೆ ಆರೋಗ್ಯ ಕೇಂದ್ರÀಕ್ಕೆ ಸಾಗಿಸಿದರಾದರೂ ಆಗಲೇ ತಲೆಯ ಭಾಗಕ್ಕೆ ಗಂಭೀರ ಗಾಯವಾಗಿದ್ದರಿಂದ ಪ್ರಾಣ ಪಕ್ಷಿಹಾರಿ ಹೋಗಿತ್ತು.

ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.