ಸೋಮವಾರಪೇಟೆ,ಏ.4: ಮನೆಯಲ್ಲಿ ಶೇಖರಿಸಿಟ್ಟಿದ್ದ ಚಿನ್ನಾಭರಣ, ನಗದು ಹಾಗೂ ಕಾಳುಮೆಣಸನ್ನು ಕಳವು ಮಾಡಿರುವ ಘಟನೆ ಸೋಮವಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸಮೀಪದ ಚೌಡ್ಲು ಗ್ರಾಮ ನಿವಾಸಿ ಚೇತನ್ ಎಂಬವರು ಕುಟುಂಬ ಸಹಿತ ಸಕಲೇಶಪುರಕ್ಕೆ ತೆರಳಿದ ಸಂದರ್ಭ ಮನೆಯ ಮುಂಬಾಗಿಲು ಒಡೆದು ಒಳನುಗ್ಗಿರುವ ಕಳ್ಳರು 32 ಗ್ರಾಂ ಚಿನ್ನ, 3,500 ನಗದು, 12 ಕೆ.ಜಿ. ಕಾಳುಮೆಣಸು ಕಳವು ಮಾಡಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಹಾನಗಲ್ಲು ಗ್ರಾಮದ ಸೀತಾರಾಂ ಅವರು ತಮ್ಮ ಗೋದಾಮಿನಲ್ಲಿ ಶೇಖರಿಸಿಟ್ಟಿದ್ದ 215 ಕೆ.ಜಿ.ಯಷ್ಟು ಕಾಳುಮೆಣಸನ್ನು ಕಳ್ಳರು ಅಪಹರಿಸಿದ್ದಾರೆ. ಗೋದಾಮಿನ ಬೀಗ ಒಡೆದು ಒಳನುಗ್ಗಿರುವ ಕಳ್ಳರು ಈ ಕೃತ್ಯ ಎಸಗಿದ್ದಾರೆ. ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.