ಸಿದ್ದಾಪುರ, ಏ: 5: ವಿದ್ಯುತ್ ಇಲಾಖೆಯವರು ಕಂಬ ಹೂತು ಹಾಕಲು ತೆಗೆದಿದ್ದ ಗುಂಡಿಯೊಂದಕ್ಕೆ ವ್ಯಕ್ತಿಯೋರ್ವ ಬಿದ್ದು ಮೃತಪಟ್ಟ ದಾರುಣ ಘಟನೆ ಸಿದ್ದಾಪುರದಲ್ಲಿ ನಡೆದಿದೆ. ಪಾಲಿಬೆಟ್ಟ ರಸ್ತೆಯ ಸುಣ್ಣದ ಗೂಡು ಬಳಿ ವಾಸವಿರುವ ಶಶಿ (52) ಎಂಬವರು ಕೆಲಸ ಬಿಟ್ಟು ಮನೆಗೆ ತೆರಳುತ್ತಿರುವ ಸಂದರ್ಭ ಆಕಸ್ಮಿಕವಾಗಿ ಕಾಲು ಜಾರಿ ವಿದ್ಯುತ್ ಇಲಾಖೆಯವರು ಕಂಬ ಹೂತು ಹಾಕಲು ತೆಗೆದಿದ್ದ ಗುಂಡಿಗೆ ಮಗುಚಿ ಬಿದ್ದು ಸ್ಥಳದಲ್ಲೇ ದುರ್ಮರಣಗೊಂಡಿದ್ದಾರೆ. ಮುಖ ಭಾಗಕ್ಕೆ ತೀವ್ರ ಸ್ವರೂಪದ ಗಾಯವಾಗಿತ್ತು. ಇಂದು ಬೆಳಿಗ್ಗೆ ಸ್ಥಳೀಯ ನಿವಾಸಿಯೊಬ್ಬರು ಶಶಿ ಅವರ ಮೃತ ದೇಹವನ್ನು ನೋಡಿ ಮಾಹಿತಿ ನೀಡಿದ್ದಾರೆ.

ಚೆಸ್ಕಾಂ ವಿರುದ್ಧ ಮೊಕದ್ದಮೆ : ವಿದ್ಯುತ್ ಇಲಾಖೆಯವರು ತೋಡಿದ ಗುಂಡಿಯನ್ನು ಸಕಾಲಕ್ಕೆ ಮುಚ್ಚದೇ ನಿರ್ಲಕ್ಷ್ಯವಹಿಸಿದ ಕಾರಣ ಶಶಿ ಸಾವನ್ನಪ್ಪಲು ಕಾರಣ ಎಂಬ ಆರೋಪದಡಿಯಲ್ಲಿ ಚೆಸ್ಕಾಂ ಇಲಾಖೆಯ ವಿರುದ್ಧ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ. ಸ್ಥಳಕ್ಕೆ ಠಾಣಾಧಿಕಾರಿ ಸುಬ್ರಮಣ್ಯ ಭೇಟಿ ನೀಡಿ ಪರಿಶೀಲಿಸಿದರು. ಶಶಿಯವರ ಮೃತದೇಹವನ್ನು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.

ಮೃತರ ಕುಟುಂಬಕ್ಕೆ ವಿದ್ಯುತ್ ಇಲಾಖೆಯಿಂದ ಪರಿಹಾರ ಧನವನ್ನು ನೀಡಲಾಯಿತು. ಮೃತ ಶಶಿ ಪತ್ನಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ.