ಚೆಟ್ಟಳ್ಳಿ, ಏ. 7: ಕುಶಾಲನಗರಕ್ಕೆ ಹೋಗುವ ಮಾರ್ಗದಲ್ಲಿರುವ ಆನೆ ಕಾಡು ಅರಣ್ಯದಲ್ಲಿ ಕಳೆದ ಒಂದು ತಿಂಗಳ ಹಿಂದೆ ಭಾರೀ ಅನಾಹುತವಾಗಿ ಅರಣ್ಯವೆಲ್ಲ ಹೊತ್ತಿ ಉರಿಯಿತು. ಅದರ ಈಗಿನ ಪರಿಸ್ಥಿತಿಯನ್ನು ಫೋಟೋ ಕ್ಲಿಕ್ಕಿಸಲು ಹವ್ಯಾಸಿ ಛಾಯಗ್ರಾಹಕ ಪುತ್ತರಿರ ಪಪ್ಪು ತಿಮ್ಮಯ್ಯ ಮುಂದಾಗಿದ್ದರು. ಆನೆಕಾಡುವಿನಲ್ಲಿ ಹೊಸದಾಗಿ ತರಬೇತಿ ಹೊಂದಿದ ಆನೆಯ ಬೆನ್ನ ಮೇಲೇರಿದ ಎರಡು ಮಾವುತರು ಅದೇ ದಾರಿಯಲ್ಲಿ ಬರುತ್ತಿರುವದನ್ನು ಕಂಡು ಆನೆಯ ಫೋಟೋ ಕ್ಲಿಕ್ಕಿಸಲು ಮುಂದಾದಾಗ ಆನೆ ಗಾಬರಿಗೊಂಡು ಅರಣ್ಯದೊಳಕ್ಕೆ ಓಡತೊಡಗಿತು. ಮಾವುತರು ಆನೆ ಮೇಲಿಂದ ಧರಧರನೆ ಇಳಿದು ತಿಮ್ಮಯ್ಯನೊಂದಿಗೆ ವಾದಕ್ಕಿಳಿದರು.

ಮತ್ತೆಯೇ ತಿಳಿದದ್ದು ತಿಮ್ಮಯ್ಯ ಉಪಯೋಗಿಸಿದ ಡಿಎಸ್‍ಎಲ್‍ಆರ್ ಕ್ಯಾಮರವನ್ನು ನೋಡಿದ ತಕ್ಷಣ ಆನೆ ಕೋವಿಯೆಂದು ನೆನೆದು ಗಾಬರಿ ಗೊಂಡಿದೆಯೆಂಬದು, ನಂತರದಲ್ಲಿ ಇಬ್ಬರು ಮಾವುತರು ಅರಣ್ಯದೊಳಗೆ ಓಡಿದ ಸಾಕಾನೆಯನ್ನು ಹುಡುಕಿ ನಡೆದರು. - ಕರುಣ್ ಕಾಳಯ್ಯ