ಸೋಮವಾರಪೇಟೆ, ಏ. 6: ಸಮೀಪದ ಚೌಡ್ಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ನಿರ್ಮಿಸಲು ಉದ್ದೇಶಿಸಲಾಗಿರುವ ನೂತನ ಗೋದಾಮು ಮತ್ತು ವಾಣಿಜ್ಯ ಸಂಕೀರ್ಣಕ್ಕೆ ಸಹಕಾರ ಸಂಘದ ಅಧ್ಯಕ್ಷ ಕೆ.ಟಿ. ಪರಮೇಶ್ ಭೂಮಿ ಪೂಜೆ ನೆರವೇರಿಸಿದರು.

ಈ ಹಿಂದೆ ಇದ್ದ ಹಳೆಯ ಕಟ್ಟಡವನ್ನು ಕೆಡವಲಾಗಿದ್ದು, ನೂತನವಾಗಿ ಗೋದಾಮು ನಿರ್ಮಿಸಲಾಗುವದು. ರಸಗೊಬ್ಬರ ಮತ್ತು ಇನ್ನಿತರ ಕೃಷಿ ಸಂಬಂಧಿತ ಉಪಕರಣಗಳನ್ನು ಶೇಖರಿಸಿಡಲು ಗೋದಾಮಿನ ಕೊರತೆ ಎದುರಾಗಿತ್ತು. ಇದನ್ನು ಮನಗಂಡು ನೂತನವಾಗಿ ಕಟ್ಟಡ ನಿರ್ಮಿಸಲು ಮುಂದಾಗಿದ್ದೇವೆ ಎಂದು ಪರಮೇಶ್ ತಿಳಿಸಿದರು.

ಸಹಕಾರ ಸಂಘಕ್ಕೆ ಆದಾಯ ಹೊಂದಿಸುವ ನಿಟ್ಟಿನಲ್ಲಿ ನೂತನ ಕಟ್ಟಡದಲ್ಲಿ ವಾಣಿಜ್ಯ ಸಂಕೀರ್ಣವನ್ನೂ ನಿರ್ಮಿಸಲಾಗುವದು ಎಂದು ತಿಳಿಸಿದ ಅವರು, ಇದರಿಂದ ಸಹಕಾರ ಸಂಘದ ರೈತ ಬಂಧುಗಳಿಗೆ ಹೆಚ್ಚಿನ ಸೌಲಭ್ಯ ಒದಗಿಸಲು ಅನುಕೂಲವಾಗಲಿದೆ ಎಂದು ನುಡಿದರು.

ಈ ಸಂದರ್ಭ ಸಂಘದ ಉಪಾಧ್ಯಕ್ಷೆ ಜಾನಕಿ ವೆಂಕಟೇಶ್, ನಿರ್ದೇಶಕರುಗಳಾದ ಎಲ್.ಜಿ. ಮದನ್, ವೈ.ಎಂ. ನಾಗರಾಜು, ಎಸ್.ಬಿ. ಈರಪ್ಪ, ಕವಿತಾ ವಿರೂಪಾಕ್ಷ, ಕೆ.ಪಿ. ಭಾನುಪ್ರಕಾಶ್, ಡಿ.ಸಿ. ರಾಜು, ಕೆ.ಎಸ್. ವಿಜಯ, ಹೆಚ್.ಎಲ್. ವಿಜೇಂದ್ರ, ಕಾರ್ಯನಿರ್ವಹಣಾಧಿಕಾರಿ ವೈ.ಪಿ. ಹರೀಶ್ ಸೇರಿದಂತೆ ಸಿಬ್ಬಂದಿಗಳು, ಹಿರಿಯ ಸಹಕಾರಿಗಳು ಉಪಸ್ಥಿತರಿದ್ದರು.