ಸೋಮವಾರಪೇಟೆ, ಏ. 8: ಚಾಲಕನ ನಿಯಂತ್ರಣ ತಪ್ಪಿದ ಕಾರು ಮಗುಚಿ ಬಿದ್ದು, ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾದ ಘಟನೆ ಪುಷ್ಪಗಿರಿ ಸಮೀಪದ ಹೆಗ್ಗಡಮನೆಯಲ್ಲಿ ಸಂಭವಿಸಿದೆ. ನಗರದ ನಿವಾಸಿಗಳಾದ ಕಾರ್ತಿಕ್, ಜಗದೀಶ್ ಹಾಗೂ ಪ್ರೇಮ್‍ಕುಮಾರ್ ಅವರುಗಳು ಆಲ್ಟೋ ಕಾರಿನಲ್ಲಿ ದೇವಸ್ಥಾನಕ್ಕೆ ತೆರಳುತ್ತಿದ್ದಾಗ ಅವಘಡ ಸಂಭವಿಸಿದೆ. ಪ್ರೇಮ್‍ಕುಮಾರ್ ಅವರ ಅಜಾಗರೂಕತೆಯ ಚಾಲನೆಯಿಂದಾಗಿ ಹೆಗ್ಗಡಮನೆಯ ಏರುರಸ್ತೆಯಲ್ಲಿ ವಾಹನ ನಿಯಂತ್ರಣ ಕಳೆದುಕೊಂಡಿದೆ.ಪರಿಣಾಮ ಮರಕ್ಕೆ ಅಪ್ಪಳಿಸಿದ ಕಾರು ರಸ್ತೆಗೆ ಮಗುಚಿ ಬಿದ್ದಿದೆ. ಆಲ್ಟೋ ಕಾರಿಗೆ ಸಣ್ಣ ಪ್ರಮಾಣದ ಜಖಂ ಉಂಟಾಗಿದ್ದು, ಅದೃಷ್ಟವಶಾತ್ ಪ್ರಯಾಣಿಕರು ಬಚಾವಾಗಿದ್ದಾರೆ. ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.