ಸೋಮವಾರಪೇಟೆ, ಏ. 8: ಗ್ರಾಮೀಣ ಪ್ರದೇಶದ ಜನಪದದ ಪ್ರಮುಖ ಅಂಗವಾದ ಸುಗ್ಗಿ ಉತ್ಸವಗಳು ಮಲೆನಾಡು ಪ್ರದೇಶದಲ್ಲಿ ಶ್ರದ್ಧಾಭಕ್ತಿಯಿಂದ ಆಚರಿಸಲ್ಪಡುತ್ತವೆ. ಪ್ರಸಕ್ತ ವರ್ಷ ಬರಗಾಲದ ಬವಣೆಯಿದ್ದರೂ ಸಹ ಅನೂಚಾನವಾಗಿ ನಡೆದುಕೊಂಡು ಬಂದಿರುವ ಪದ್ಧತಿಯನ್ನು ಕೈಬಿಡದೇ ಸಾಂಪ್ರದಾಯಿಕ ಆಚರಣೆಗೆ ಗ್ರಾಮೀಣ ಪ್ರದೇಶ ಸಜ್ಜಾಗುತ್ತಿದೆ.

ಮಳೆಗಾಲ ಪ್ರಾರಂಭವಾಗಿ ಗ್ರಾಮೀಣ ಭಾಗದ ಜನರು ಕೃಷಿಕಾರ್ಯಗಳಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳುವ ಸಮಯ ಸನ್ನಿಹಿತವಾಗುತ್ತಿರುವಾಗಲೇ ಕೃಷಿ ಕಾರ್ಯಗಳಿಗೆ ಯಾವದೇ ತೊಂದರೆಯಾಗಬಾರದು, ಗ್ರಾಮ ಸುಭೀಕ್ಷೆಯಿಂದಿರಬೇಕು ಎಂದು ಗ್ರಾಮದ ಕಲ್ಯಾಣಕ್ಕಾಗಿ ಗ್ರಾಮ ದೇವರಿಗೆ ಹಾಗೂ ಪ್ರಕೃತಿದೇವಿಗೆ ಸಾಮೂಹಿಕವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸುವ ವಿಶಿಷ್ಟ ಹಬ್ಬವಾದ ಸುಗ್ಗಿ ಉತ್ಸವಗಳು ತಾಲೂಕಿನ ಕೆಲ ಗ್ರಾಮೀಣ ಪ್ರದೇಶಗಳಲ್ಲಿ ಶ್ರದ್ಧಾಭಕ್ತಿ ಯಿಂದ ಇಂದಿಗೂ ಜರುಗುತ್ತಿವೆ.

ಸುಗ್ಗಿ ಉತ್ಸವ ಪ್ರಾರಂಭವಾಗುತ್ತಿದ್ದಂತೆ ಗ್ರಾಮದ ಜನರ ಮನೆಗಳಲ್ಲಿ ಗ್ರಾಮದೇವತೆಗಳ ಪೂಜೆಗಳು ನಡೆಯುತ್ತವೆ. ಗ್ರಾಮದಲ್ಲಿ ರೋಗರುಜಿನಗಳು ಬರದಂತೆ, ಮುಂದೆ ಉತ್ತಮ ಮಳೆಯಾಗಿ ಕೃಷಿ ಚಟುವಟಿಕೆ ನಡೆದು ಸಮೃದ್ಧ ಫಸಲು ಕೈಸೇರುವದಕ್ಕೆ ಗ್ರಾಮದೇವತೆಗಳು ಹರಸಬೇಕೆಂದು ಪ್ರಾರ್ಥನೆ ಮಾಡುತ್ತಾರೆ.

ಸುಗ್ಗಿ ಉತ್ಸವ ಪ್ರಾರಂಭದ ದಿನದಿಂದ ‘ಸುಗ್ಗಿ ಸಾರು’ ಎಂಬ ಕಟ್ಟುನಿಟ್ಟಿನ ಅಚರಣೆಯನ್ನು ಕೈಗೊಳ್ಳಲಾಗುತ್ತದೆ. ಉತ್ಸವದ 15ದಿನಗಳಲ್ಲಿ ಹಸಿ ಮರ ಕಡಿಯುವದು, ಒಣಗಿದ ಗಿಡ ಬಳ್ಳಿಗಳನ್ನು ಮುರಿಯದಂತೆ ಎಚ್ಚರ ವಹಿಸುತ್ತಾರೆ. ಹಗಲು ವೇಳೆ ನೆಂಟರಿಷ್ಟರು ಮನೆ ಸೇರದಂತೆ ನಿರ್ಬಂಧ ವಿಧಿಸುತ್ತಾರೆ. ನಕ್ಷತ್ರಗಳು ಕಂಡ ನಂತರವೇ ಮನೆಯೊಳಕ್ಕೆ ಬರಮಾಡಿಕೊಳ್ಳುತ್ತಾರೆ. ಹಗಲಿನ ವೇಳೆ ಹೊರಗಡೆಯಿಂದ ಆಹಾರ ಸಾಮಗ್ರಿಗಳನ್ನು ಖರೀದಿಸುವಂತಿಲ್ಲ. ಇಂತಹ ಕಟ್ಟುಪಾಡುಗಳು ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ಸುಗ್ಗಿ ಸಂದರ್ಭ ಚಾಲ್ತಿಯಲ್ಲಿರುತ್ತವೆ.

ಕೂತಿ ನಾಡು ಶ್ರೀ ಸಬ್ಬಮ್ಮ ದೇವಿಯ(ಲಕ್ಷ್ಮೀ)ಉತ್ಸವ ಎಂದೇ ಹೆಸರಾಗಿರುವ ನಗರಳ್ಳಿ ಸುಗ್ಗಿ ಹಲವು ವೈಶಿಷ್ಟ್ಯಗಳೊಂದಿಗೆ ನೆರವೇರುತ್ತದೆ. ಕೂತಿ ನಾಡು ವ್ಯಾಪ್ತಿಗೆ ಒಳಪಡುವ ಗ್ರಾಮಗಳಾದ ಕೂತಿ, ಯಡದಂಟೆ, ಕುಂದಳ್ಳಿ, ನಗರಳ್ಳಿ, ಹೆಮ್ಮನಗದ್ದೆ, ಕನ್ನಳ್ಳಿ, ಬೀಕಳ್ಳಿ, ಬೆಟ್ಟದಳ್ಳಿ, ಜಕ್ಕನಳ್ಳಿ, ಬೆಟ್ಟದಕೊಪ್ಪ, ಹಳ್ಳಿಯೂರು, ಕೊತ್ತನಳ್ಳಿ, ಇನಕನಹಳ್ಳಿ, ಬೆಂಕಳ್ಳಿ, ಕುಡಿಗಾಣ, ನಾಡ್ನಳ್ಳಿ, ತಡ್ಡಿಕೊಪ್ಪ ಹಾಗೂ ಪಕ್ಕದ ಸಕಲೇಶಪುರ ತಾಲೂಕಿನ ಓಡಳ್ಳಿ ಸೇರಿದಂತೆ ಒಟ್ಟು 18 ಗ್ರಾಮಗಳ ಜನರು ಒಂದೆಡೆ ಕಲೆತು ಗ್ರಾಮ ದೇವತೆ ಸಬ್ಬಮ್ಮ ದೇವಿಗೆ ಅನಾದಿಕಾಲದಿಂದ ನಡೆದುಬಂದ ಸಾಂಪ್ರದಾಯಿಕ ಪೂಜಾ ವಿಧಿವಿಧಾನಗಳನ್ನು ನೆರವೇರಿಸುತ್ತಾರೆ.

ಉತ್ಸವದ ಕೊನೆ ದಿನ ನಗರಳ್ಳಿಯ ಸುಗ್ಗಿ ದೇವರ ಬನದಲ್ಲಿ ಅಳವಡಿಸಲಾಗಿರುವ ಬೃಹತ್ ಕಲ್ಲಿನ ಕಂಬದಲ್ಲಿ 4ಮಂದಿ ದೇವರ ಒಡೆಕಾರರನ್ನು ಬೆತ್ತದ ಉಯ್ಯಾಲೆಯಲ್ಲಿ ತೂಗುವ ಜಾನಪದದ ಭಾಗವಂತೂ ಗ್ರಾಮೀಣ ಭಾಗದ ಜನರು ಗ್ರಾಮ ದೇವತೆಯ ಮೇಲಿಟ್ಟಿರುವ ಭಕ್ತಿಭಾವವನ್ನು ಪ್ರಕಟಗೊಳಿಸುವ ಬಹುಮುಖ್ಯ ಕ್ಷಣಗಳಾಗುತ್ತವೆ.

ಇಲ್ಲಿಗೆ ಸಮೀಪದ ತೋಳೂರು ಶೆಟ್ಟಳ್ಳಿ ಸಬ್ಬಮ್ಮ ದೇವರ ವಾರ್ಷಿಕ ಸುಗ್ಗಿ ಉತ್ಸವ ಕೂಡ ಈ ವ್ಯಾಪ್ತಿಯಲ್ಲಿ ನಡೆಯುವ ಬಹುದೊಡ್ಡ ಸುಗ್ಗಿ ಉತ್ಸವವಾಗಿದೆ. ಬೀರೇದೇವರ ಹಬ್ಬ ಆಚರಣೆಯೊಂದಿಗೆ ಸುಗ್ಗಿ ಪ್ರಾರಂಭವಾಗಲಿದ್ದು ಗುಮ್ಮನ ಮರಿ ಪೂಜೆ, ಸಾಮೂಹಿಕ ಭೋಜನ, ಊರೊಡೆಯನ ಪೂಜೆ, ಬೆಂಕಿಕೊಂಡ ಹಾಯುವದು, ಮೊದಲ ಬೇಟೆ ನಂತರ ಊರು ಸುಗ್ಗಿ, ದೇವರ ಗಂಗಾಸ್ನಾನ ಹಾಗೂ ದೊಡ್ಡ ಪೂಜೆಗಳು ಸುಗ್ಗಿ ಉತ್ಸವದ ಪ್ರಮುಖ ಭಾಗಗಳಾಗಿವೆ. ಇದರೊಂದಿಗೆ ಸೋಮವಾರಪೇಟೆ ವ್ಯಾಪ್ತಿಯ ಚೌಡ್ಲು,ಯಡೂರು, ಹಾನಗಲ್ಲು ಶೆಟ್ಟಳ್ಳಿ ಗ್ರಾಮಗಳಲ್ಲೂ ಸುಗ್ಗಿ ಉತ್ಸವ ನಡೆಯಲಿವೆ.

ಆಧುನಿಕ ಯುಗದಲ್ಲಿ ಯುವ ಜನಾಂಗ ಉದ್ಯೋಗ ನಿಮಿತ್ತ ಗ್ರಾಮೀಣ ಪ್ರದೇಶದಿಂದ ನಗರಗಳತ್ತ ವಲಸೆ ಹೋಗಿದ್ದು, ಸುಗ್ಗಿ ಹಬ್ಬಕ್ಕೆ ಎಲ್ಲರೂ ತಮ್ಮ ಗ್ರಾಮಗಳಿಗೆ ವಾಪಸ್ ಆಗುತ್ತಾರೆ. ಮನೆಗಳಲ್ಲಿ ಉಳಿದಿರುವ ವಯೋವೃದ್ಧರಾದಿಯಾಗಿ ಹೊಸ ತಲೆಮಾರಿನ ಮಂದಿಯೂ ಒಂದೆಡೆ ಕಲೆಯುವದರಿಂದ ಸುಗ್ಗಿ ಸಂಭ್ರಮಕ್ಕೆ ಹೆಚ್ಚು ಮೆರುಗು ಬರುತ್ತದೆ.

ಗ್ರಾಮೀಣ ಭಾಗದಲ್ಲಿ ಇಂದಿಗೂ ಕೃಷಿಕಾರ್ಯ ಹಾಗೂ ಗ್ರಾಮ ದೇವರ ಪೂಜೆಗೆ ಅವಿನಾಭಾವ ಸಂಬಂಧವಿದ್ದು, ಗ್ರಾಮ ದೇವಿಯನ್ನು ಸಾಮೂಹಿಕವಾಗಿ ಪೂಜಿಸುವ ಶ್ರದ್ಧಾಭಕ್ತಿಯ ಉತ್ಸವವಾಗಿ ಸುಗ್ಗಿ ಹಬ್ಬಗಳು ಇಂದಿಗೂ ಪ್ರಚಲಿತದಲ್ಲಿವೆ. ಗ್ರಾಮ ದೇವತೆ ಸಂತುಷ್ಟಳಾದರೆ ಇಡೀ ಗ್ರಾಮ ಸುಭೀಕ್ಷೆಯಿಂದಿರುತ್ತದೆ ಎಂಬ ಭಾವನೆಯೊಂದಿಗೆ ಸುಗ್ಗಿ ಹಬ್ಬವನ್ನು ಅತ್ಯಂತ ಶ್ರದ್ಧೆ ಹಾಗೂ ನಿಷ್ಠೆಯಿಂದ ಆಚರಿಸಿಕೊಂಡು ಬರಲಾಗುತ್ತಿದೆ.

ಇದೀಗ ಎಲ್ಲೆಡೆ ಭತ್ತ ಕೃಷಿ ಮುಕ್ತಾಯವಾಗಿದ್ದು, ಮುಂದಿನ ಸಾಲಿನ ಕೃಷಿಕಾರ್ಯಕ್ಕೆ ಮಳೆಗಾಲ ಆಗಮಿಸಬೇಕಾಗಿದೆ. ಈ ಅವಧಿಯಲ್ಲಿ ಪ್ರಕೃತಿದೇವಿ ಮುನಿಸಿಕೊಳ್ಳದೆ ಕಾಲಕಾಲಕ್ಕೆ ತಕ್ಕಂತೆ ಮಳೆ-ಬೆಳೆ ನೀಡಲಿ ಎಂದು ಗ್ರಾಮ ದೇವರಲ್ಲಿ ಪೂಜಿಸಿ ಕೃಷಿಕಾರ್ಯದಲ್ಲಿ ತೊಡಗಲು ಸಿದ್ಧತೆ ನಡೆಸುವ ಗ್ರಾಮೀಣ ರೈತನ ಸಂಭ್ರಮದ ಸುಗ್ಗಿಗೆ ದಿನಗಣನೆ ಆರಂಭವಾಗಿದೆ.