ಮಡಿಕೇರಿ, ಏ. 19 : ನಗರದ ಸಂಪಿಗೆ ಕಟ್ಟೆ ವ್ಯಾಪ್ತಿಯಲ್ಲಿ ತಾವು ಖರೀದಿಸಿರುವ 51 ಸೆಂಟ್ ಜಾಗದಲ್ಲಿ ಕಡಂಗ ಪ್ರದೇಶವಿದೆಯೆಂದು ಆರೋಪಿಸಿ, ಯಾವದೇ ದಾಖಲೆಗಳಿಲ್ಲದೆ ಅತಿಕ್ರಮ ಪ್ರವೇಶ ಮಾಡಿರುವ ನಗರಸಭಾ ಅಧ್ಯಕ್ಷರು ಹಾಗೂ ಮೂಡಾ ಅಧ್ಯಕ್ಷರ ವಿರುದ್ಧ ದೂರು ದಾಖಲಿಸುವದಾಗಿ ಮೂಡಾದ ಮಾಜಿ ಅಧ್ಯಕ್ಷೆ ಸುರಯ್ಯಾ ಅಬ್ರಾರ್ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ತಾ. 18 ರಂದು ತಮ್ಮ ಸ್ವಾಧೀನದ ಜಾಗಕ್ಕೆ ಅತಿಕ್ರಮ ಪ್ರವೇಶ ಮಾಡಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಮೂಡಾ ಅಧ್ಯಕ್ಷ ಚುಮ್ಮಿ ದೇವಯ್ಯ, ನಗರಸಭಾ ಸದಸ್ಯೆ ಸಂಗೀತ ಪ್ರಸನ್ನ, ಸಾರ್ವಜನಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಪ್ರಸನ್ನ ಭಟ್ ಸೇರಿದಂತೆ ಇನ್ನೂ ಕೆಲವರ ವಿರುದ್ಧ ಅತಿಕ್ರಮ ಪ್ರವೇಶ ಮತ್ತು ಮಾನನಷ್ಟ ಮೊಕದ್ದಮೆ ಹೂಡುವದಾಗಿ ತಿಳಿಸಿದರು.

ತಮ್ಮ ಒಡೆತನದಲ್ಲಿರುವ 51 ಸೆಂಟ್ ಜಾಗಕ್ಕೆ ಇತ್ತೀಚೆಗಷ್ಟೆ ಬೇಲಿ ನಿರ್ಮಿಸಲಾಗಿತ್ತು. ಆದರೆ, ಕಡಂಗ ಜಾಗ ಒತ್ತುವರಿಯಾಗಿದೆಯೆಂದು ಆರೋಪಿಸಿ ಮಂಗಳವಾರ ಅಧಿಕಾರಿಗಳ ಅನುಪಸ್ಥಿತಿಯಲ್ಲಿ ನಗರಸಭಾ ಅಧ್ಯಕ್ಷರು ಮತ್ತು ಮೂಡಾ ಅಧ್ಯಕ್ಷರು ಮಾತ್ರ ಸ್ಥಳಕ್ಕೆ ಭೇಟಿ ನೀಡಿ ಕಾನೂನು ಬಾಹಿರವಾಗಿ ಬೇಲಿಯನ್ನು ತೆರವುಗೊಳಿಸಿದ್ದಾರೆ. ನಿಯಮಾನುಸಾರ ಖಾಸಗಿ ಜಾಗದೊಳಗೆ ಪ್ರವೇಶ ಮಾಡುವಾಗ ಜಾಗದ ಮಾಲೀಕರಿಗೆ ನೋಟಿಸ್ ನೀಡಿ, ಮಾಹಿತಿ ನೀಡಬೇಕು. ಆದರೆ, ಇದು ಯಾವದನ್ನೂ ಮಾಡದೆ, ಅಧಿಕಾರಿಗಳನ್ನು ಕರೆದೊಯ್ಯದೆ ಗೂಂಡಾಗಿರಿಯ

(ಮೊದಲ ಪುಟದಿಂದ) ವರ್ತನೆಯನ್ನು ಪ್ರದರ್ಶಿಸಲಾಗಿದೆ ಎಂದು ಸುರಯ್ಯಾ ಅಬ್ರಾರ್ ಆರೋಪಿಸಿದರು.

ತಾವು ಖರೀದಿಸಿದ 51 ಸೆಂಟ್ ಜಾಗವನ್ನು ಸರ್ಕಾರಿ ಸರ್ವೆ ನಡೆಸಿ ಎಲ್ಲಾ ದಾಖಲೆಗಳನ್ನು ಹೊಂದಲಾಗಿದೆ. ದಾಖಲೆಗಳಲ್ಲಿ ಈ ಪ್ರದೇಶದಲ್ಲಿ ಕಡಂಗವಿಲ್ಲವೆಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಆದರೆ, ಕಡಂಗ ಇರುವ ಬಗ್ಗೆ ನಗರಸಭೆಯ ಬಳಿ ಯಾವದೇ ದಾಖಲೆಗಳಿಲ್ಲವೆಂದು ಅವರು ಸಮರ್ಥಿಸಿಕೊಂಡರು. ತಮ್ಮ ಜಾಗದ ಪಕ್ಕದಲ್ಲಿರುವ ಜಾಗದ ಮಾಲೀಕರೊಬ್ಬರು ಜಲಮೂಲವಿರುವ ಪ್ರದೇಶದಲ್ಲೆ ನೂರಾರು ಲೋಡ್ ಮಣ್ಣನ್ನು ಹಾಕಿದ್ದು, ಇದರಿಂದ ಜಲಮೂಲಕ್ಕೆ ಧಕ್ಕೆಯಾಗಿದೆಯೇ ಹೊರತು, ತಾವು ಅಳವಡಿಸಿದ ಬೇಲಿಯಿಂದ ಯಾವದೇ ಅನ್ಯಾಯವಾಗಿಲ್ಲ ವೆಂದರು.

ಸಂಪಿಗೆಕಟ್ಟೆ ವ್ಯಾಪ್ತಿಯ ಎಲ್ಲಾ ಜಾಗವನ್ನು ಸರ್ವೆ ಮಾಡಲಿ ಎಂದು ಒತ್ತಾಯಿಸಿದರು. ತಮ್ಮ ಜಾಗವನ್ನು ಸರ್ಕಾರಿ ಸರ್ವೆ ನಡೆಸಿ ದಾಖಲೆಯನ್ನು ಹೊಂದಲಾಗಿದೆ. ಸರ್ಕಾರಿ ಸರ್ವೆಯ ಬಗ್ಗೆ ನಗರಸಭೆಗೆ ಸಂಶಯವಿದೆಯೆ ಎಂದು ಅವರು ಪ್ರಶ್ನಿಸಿದರು. ಬೇಲಿ ತೆರವುಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಹೋರಾಟದ ಮೂಲಕ ನ್ಯಾಯ ಪಡೆಯುವದಾಗಿ ಸುರಯ್ಯಾ ಅಬ್ರಾರ್ ಸ್ಪಷ್ಟಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಸುರಯ್ಯಾ ಅಬ್ರಾರ್ ಅವರ ಪತಿ ವಿ.ಟಿ. ಅಬ್ರಾರ್, ಸಂಬಂಧಿಕರಾದ ವಿ.ಟಿ.ಅಸ್ಲಂ ಹಾಗೂ ನಾದಿಯಾ ಸಿರಾಜ್ ಉಪಸ್ಥಿತರಿದ್ದರು.