ಸೋಮವಾರಪೇಟೆ, ಏ. 20: ಮನೆಯ ಮುಂಭಾಗ ನಿಂತಿದ್ದ ವಿಚಾರದಲ್ಲಿ ಮಾತಿಗೆ ಮಾತು ಬೆಳೆದು ವ್ಯಕ್ತಿಯೋರ್ವರ ಮೇಲೆ ಹಲ್ಲೆ ನಡೆಸಿದ್ದೂ ಅಲ್ಲದೆ, ಕೊಲೆ ಬೆದರಿಕೆ ಒಡ್ಡಿರುವ ಬಗ್ಗೆ ಸೋಮವಾರಪೇಟೆ ಠಾಣೆಯಲ್ಲಿ ದೂರು ದಾಖಲಾಗಿದೆ.

ಸಮೀಪದ ತೋಳೂರುಶೆಟ್ಟಳ್ಳಿ ಗ್ರಾಮ ನಿವಾಸಿ ಡಿ.ಕೆ. ಪ್ರಸನ್ನ ಎಂಬವರ ಮನೆಯ ಮುಂಭಾಗ ಜಯೇಂದ್ರ ಎಂಬವರು ನಿಂತಿದ್ದು, ಈ ಬಗ್ಗೆ ಪ್ರಶ್ನೆ ಮಾಡಿದ ಪ್ರಸನ್ನ ಅವರ ಮೇಲೆ ಜಯೇಂದ್ರ ಹಾಗೂ ಆತನ ಸಂಗಡಿಗರಾದ ವಿನಯ್, ಯೋಗೇಶ್ ಅವರುಗಳು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಜಗಳವನ್ನು ಬಿಡಿಸಲು ತೆರಳಿದ ಪ್ರಸನ್ನ ಅವರ ಪತ್ನಿ ಗೌರಮ್ಮ ಅವರ ಮೇಲೂ ಆರೋಪಿಗಳು ಹಲ್ಲೆ ನಡೆಸಿದ್ದು, ಕೊಲೆ ಬೆದರಿಕೆ ಒಡ್ಡಿರುವದಾಗಿ ನೀಡಿದ ದೂರಿನ ಮೇಲೆ ಮೊಕದ್ದಮೆ ದಾಖಲಿಸಿರುವ ಪೊಲೀಸರು, ಮುಂದಿನ ಕ್ರಮ ಕೈಗೊಂಡಿದ್ದಾರೆ.