ಸೋಮವಾರಪೇಟೆ, ಏ. 20: ಆದಿ ದ್ರಾವಿಡ ಸಮಾಜದ ತಾಲೂಕು ಘಟಕದ ವತಿಯಿಂದ ಇಲ್ಲಿನ ಮಹಿಳಾ ಸಮಾಜದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ 126ನೇ ಜನ್ಮ ದಿನಾಚರಣೆ ಹಾಗೂ ವಾರ್ಷಿಕ ಸಭೆ ನಡೆಸಲಾಯಿತು. Áರ್ಯಕ್ರಮವನ್ನು ಮೂಡಬಿದಿರೆ ಆದಿ ದ್ರಾವಿಡ ಸಮಾಜದ ತಾಲೂಕು ಘಟಕದ ಗೌರವಾಧ್ಯಕ್ಷ ಸೀನಾ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಇಂದು ಜಿಲ್ಲೆಯಲ್ಲಿ ಆದಿದ್ರಾವಿಡ ಸಮಾಜವನ್ನು ದಾರಿತಪ್ಪಿಸುವ ಮೂಲಕ ಸಂಘಟನೆಯನ್ನು ದುರ್ಬಲಗೊಳಿಸುವ ಪ್ರಯತ್ನ ನಡೆಯುತ್ತಿದ್ದು, ಇದಕ್ಕೆ ಸಮಾಜ ಬಾಂಧವರು ಕಿವಿಗೊಡದೆ, ಬಲಿಷ್ಠ ಸಮಾಜ ನಿರ್ಮಾಣ ಮಾಡಲು ಮುಂದಾಗಬೇಕೆಂದರು. ಸಭೆಯ ಅಧ್ಯಕ್ಷತೆಯನ್ನು ತಾಲೂಕು ಘಟಕದ ಅಧ್ಯಕ್ಷ ಜನಾರ್ಧನ್ ವಹಿಸಿದ್ದರು. ವೇದಿಕೆಯಲ್ಲಿ ಸಂಘದ ಗೌರವಾಧ್ಯಕ್ಷ ಓಂಕಾರಪ್ಪ, ಪ್ರಮುಖರಾದ ಶಿವಪ್ಪ, ಕುಶಾಲಪ್ಪ, ವಿಶ್ವನಾಥ, ಲೋಕನಾಥ ಸೇರಿದಂತೆ ಹಲವರು ಉಪಸ್ಥಿತರಿದ್ದರು.