ಮಡಿಕೇರಿ, ಏ. 20: ಕೊಡಗು ಗೌಡ ಯುವ ವೇದಿಕೆ ವತಿಯಿಂದ ಪೈಕೇರ ಕುಟುಂಬಸ್ಥರ ಆಶ್ರಯದಲ್ಲಿ ಹತ್ತು ಕುಟುಂಬ ಹದಿನೆಂಟು ಗೋತ್ರದ ಗೌಡ ಜನಾಂಗ ಬಾಂಧವರಿಗಾಗಿ ಏರ್ಪಡಿಸಲಾಗಿರುವ ಪೈಕೇರ ಕಪ್ ಕ್ರಿಕೆಟ್ ಉತ್ಸವಕ್ಕೆ ತಾ. 21 ರಂದು (ಇಂದು) ಚಾಲನೆ ದೊರಕಲಿದೆ.ಇಲ್ಲಿನ ಜ. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯಲಿರುವ ಕ್ರಿಕೆಟ್ ಉತ್ಸವಕ್ಕೆ ಆದಿಚುಂಚನಗಿರಿ ಮಠದ ಕೊಡಗು ಹಾಗೂ ಹಾಸನ ಶಾಖೆಯ ಮಠಾಧಿಪತಿ ಶಂಭುನಾಥ ಸ್ವಾಮೀಜಿ ಕ್ರೀಡಾಜ್ಯೋತಿ ಬೆಳಗುವ ಮೂಲಕ ಚಾಲನೆ ನೀಡುವರು. ಕೇಂದ್ರ ಯೋಜನಾ ಖಾತೆ ಸಚಿವ ದೇವರಗುಂಡ ಸದಾನಂದಗೌಡ ಸಮಾರಂಭವನ್ನು ಉದ್ಘಾಟಿಸುವರು. ಕ್ರೀಡಾಕೂಟವನ್ನು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಉದ್ಘಾಟಿಸುವರು. ಯುವ ವೇದಿಕೆ ಅಧ್ಯಕ್ಷ ಪೈಕೇರ ಮನೋಹರ್ ಮಾದಪ್ಪ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಶಾಸಕರುಗಳಾದ ಕೊಂಬಾರನ ಜಿ. ಬೋಪಯ್ಯ, ಮಂಡೇಪಂಡ ಅಪ್ಪಚ್ಚುರಂಜನ್, ಸುನಿಲ್ ಸುಬ್ರಮಣಿ, ಶಾಂತೆಯಂಡ ವೀಣಾ ಅಚ್ಚಯ್ಯ, ಸಂಸದ ಪ್ರತಾಪ್ ಸಿಂಹ, ಅರೆಭಾಷೆ ಅಕಾಡೆಮಿ ಅಧ್ಯಕ್ಷ ಕೊಲ್ಯದ ಗಿರೀಶ್, ಪೈಕೇರ ಕುಟುಂಬದ ಪಟ್ಟೆದಾರ ನಂಜುಂಡ ಸೇರಿದಂತೆ ಇನ್ನಿತರ ಪ್ರಮುಖರು ಹಾಜರಿರುವರು.

ಕಾರ್ಯಕ್ರಮಕ್ಕೆ ಮುನ್ನಾ ಸ್ವಾಮೀಜಿ ಸೇರಿದಂತೆ ಅತಿಥಿಗಳನ್ನು ಮೈದಾನದ ಬಳಿಯಿಂದ ವೇದಿಕೆವರೆಗೆ ಪೂರ್ಣಕುಂಭ ಸ್ವಾಗತದೊಂದಿಗೆ ಬರ ಮಾಡಿಕೊಳ್ಳಲಾಗುವದು ಎಂದು ಪ್ರಕಟಣೆ ತಿಳಿಸಿದೆ.