ಶ್ರೀಮಂಗಲ, ಏ. 21: ಸರಕಾರಿ ಜಾಗಗಳನ್ನು ಒತ್ತುವರಿ ಮಾಡಿಕೊಂಡು ಕಾಫಿ ತೋಟ ಮಾಡಿ ಜೀವನ ಸಾಗಿಸುತ್ತಿರುವ ಬೆಳೆಗಾರರ ಜಾಗವನ್ನು ತೆರವುಗೊಳಿಸಲು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಆದೇಶ ನೀಡಿರುವದನ್ನು ಜಿಲ್ಲಾ ಬೆಳೆಗಾರ ಒಕ್ಕೂಟ ಖಂಡಿಸಿದೆ. ಸರಕಾರಿ ಜಾಗ ಒತ್ತುವರಿ ಮಾಡಿಕೊಂಡು ಕಾಫಿ ತೋಟ ಮಾಡಿರುವದನ್ನು ತೆರವುಗೊಳಿಸಲು ಕಾಳಜಿ ತೋರುವ ಸಚಿವರು ಬೆಂಗಳೂರಿನ ಕೆರೆ ಒತ್ತುವರಿಗಳನ್ನು ತೆರವುಗೊಳಿಸಲು ಕಾಳಜಿ ಏಕೆ ತೋರುತ್ತಿಲ್ಲ ಎಂದು ಪ್ರಶ್ನಿಸಿರುವ ಒಕ್ಕೂಟ ತಮ್ಮ ಜೀವನಕ್ಕಾಗಿ ಒತ್ತುವರಿ ಮಾಡಿಕೊಂಡಿರುವ ಕಾಫಿ ತೋಟಗಳನ್ನು ಸಕ್ರಮಗೊಳಿಸಲು ಕ್ರಮ ಕೈಗೊಳ್ಳಲಿ ಎಂದು ಒತ್ತಾಯಿಸಿದೆ.

ಗೋಣಿಕೊಪ್ಪಲು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಭಾಂಗಣದಲ್ಲಿ ಒಕ್ಕೂಟದ ಅಧ್ಯಕ್ಷ ಕೈಬುಲಿರ ಎಂ. ಹರೀಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಲಾಯಿತು. ಜಿಲ್ಲೆಯಲ್ಲಿ ಜೀತ ಪದ್ದತಿ ಇದೆ ಎಂದು ವಾಸ್ತವಾಂಶದ ಅರಿವಿಲ್ಲದೆ ಸಚಿವರು ಹೇಳಿಕೆ ನೀಡಿರುವದು ಸರಿಯಲ್ಲ. ಬೆಳೆಗಾರರಿಂದ ಸಾಲ ಪಡೆದ ಕಾರ್ಮಿಕರು ಹಿಂದಿರುಗಿಸಬೇಕಾಗಿಲ್ಲ. ಕೇಳಿದರೆ ಕ್ರಿಮಿನಲ್ ಮೊಕದ್ದಮೆ ಹಾಕಿ ಎಂದು ಹೇಳಿದ ಸಚಿವರ ಹೇಳಿಕೆ ಸರಿಯಲ್ಲ. ರೈತರು ಹಾಗೂ ಬೆಳೆಗಾರರು ಬ್ಯಾಂಕುಗಳಲ್ಲಿ ಹೊಂದಿರುವ ಸಾಲಗಳನ್ನು ಸಹ ಬ್ಯಾಂಕಿಗೆ ಮರುಪಾವತಿ ಮಾಡಬೇಡಿ ಎಂದು ಸಚಿವರು ಆದೇಶ ಮಾಡಲಿ ಎಂದು ಸವಾಲು ಹಾಕಿದರು.

ತಮಿಳುನಾಡು ರಾಜ್ಯದ ರೈತರ ಸಾಲ ಮನ್ನಾ ಮಾಡಲು ಮದ್ರಾಸ್ ಹೈಕೋರ್ಟ್ ನೀಡಿದ ಆದೇಶ ಸ್ವಾಗತಿಸಿದ ಸಭೆ, ಸರಕಾರ ಬೆಳೆಗಾರರ ಸಮಸ್ಯೆಗೆ ಸ್ಪಂದಿಸದಿದ್ದರೆ ನ್ಯಾಯಾಲಯದ ಮೊರೆ ಹೋಗುವದು ಅನಿವಾರ್ಯವೆಂದು ಅಭಿಪ್ರಾಯ ವ್ಯಕ್ತವಾಯಿತು.

ಸಂಸದರು ಹಾಗೂ ಶಾಸಕರು ತಮ್ಮ ವೇತನ ಮತ್ತು ಸೌಲಭ್ಯಗಳನ್ನು ಕೆಲವು ವರ್ಷದ ಹಿಂದೆ ಶೇ. 300ರಷ್ಟು ಹೆಚ್ಚಿಸಿಕೊಂಡಿದ್ದು, ರೈತರು ಹಾಗೂ ಬೆಳೆಗಾರರ ಉತ್ಪನ್ನಗಳಿಗೆ ತಮ್ಮ ವೇತನ ಪರಿಷ್ಕರಣೆ ಮಾಡಿಕೊಂಡಂತೆಯೇ ಶೇ. 300ರಷ್ಟು ಬೆಲೆ ಹೆಚ್ಚಿಸಿದರೆ ಉಭಯ ಸರಕಾರಗಳಲ್ಲಿ ಸಾಲ ಮನ್ನಾ ಮಾಡಲು ಭಿಕ್ಷೆ ಬೇಡುವ ಅವಶ್ಯಕತೆ ಇಲ್ಲ ಎಂದು ಕಿಡಿಕಾರಲಾಯಿತು.

ಕಸ್ತೂರಿ ರಂಗನ್ ವರದಿಯ ಬಗ್ಗೆ ಜಿಲ್ಲಾಡಳಿತದ ಅಧಿಕಾರಿಗಳು ಜನರ ಗೊಂದಲಗಳಿಗೆ ಸೂಕ್ತ ಉತ್ತರಗಳನ್ನು ನೀಡಿ ವಾಸ್ತವಾಂಶವನ್ನು ತಿಳಿಸುವ ಕೆಲಸ ಮಾಡದೆ ಜನರನ್ನು ಕತ್ತಲೆಯಲ್ಲಿಟ್ಟಿದ್ದಾರೆ. ಜನಪ್ರತಿನಿಧಿಗಳು ಜನರಿಗೆ ವಾಸ್ತವಾಂಶದ ಅರಿವಿಕೆ ಮಾಡದೆ ಗೊಂದಲ ಸೃಷ್ಟಿಸಿದ್ದಾರೆ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.

ಸಭೆಯಲ್ಲಿ ಕಾರ್ಯದರ್ಶಿ ಅಣ್ಣೀರ ಹರೀಶ್ ಮಾದಪ್ಪ, ತಾಂತ್ರಿಕ ಸಲಹೆಗಾರ ಚೆಪ್ಪುಡಿರ ಶೆರಿ ಸುಬ್ಬಯ್ಯ, ಪ್ರಮುಖರಾದ ಬೊಳ್ಳೇರ ಜಿ. ರಾಜ ಸುಬ್ಬಯ್ಯ, ಬಿ. ಜಿ. ಮುದ್ದಯ್ಯ, ಬಿ.ಕೆ. ಅಪ್ಪಯ್ಯ, ಅಜ್ಜಮಾಡ ಟಿ. ಚಂಗಪ್ಪ, ಎ. ಎಂ. ಅಯ್ಯಣ್ಣ, ಶ್ರೀಮಂಗಲ ಹೋಬಳಿ ಒಕ್ಕೂಟದ ಅಧ್ಯಕ್ಷ ಕಾಳಿಮಾಡ ತಮ್ಮು ಮುತ್ತಣ್ಣ, ಕಾರ್ಯದರ್ಶಿ ಬಿ.ಪಿ. ದೇವಯ್ಯ, ಬಿರುನಾಣಿ ಬೆಳೆಗಾರ ಒಕ್ಕೂಟದ ಅಧ್ಯಕ್ಷ ಬಿ.ಕೆ. ಪೊನ್ನಪ್ಪ, ಒಕ್ಕೂಟದ ಮಾಜಿ ಕಾರ್ಯದರ್ಶಿ ಜಮ್ಮಡ ಎಸ್. ಮೋಹನ್ ಮಾದಪ್ಪ ಮತ್ತಿತರರು ಮಾತನಾಡಿದರು.