ಮಡಿಕೇರಿ, ಏ. 21: ಕೊಡಗು ಗೌಡ ಯುವ ವೇದಿಕೆ ವತಿಯಿಂದ ಇಲ್ಲಿನ ಜ. ತಿಮ್ಮಯ್ಯ ಕ್ರೀಡಾಂಗಣ ದಲ್ಲಿ ನಡೆಯುತ್ತಿರುವ ಪೈಕೇರ ಕ್ರಿಕೆಟ್ ಕಪ್ ಪಂದ್ಯಾವಳಿಯ ಮೊದಲನೇ ದಿನವಾದ ಇಂದು ಮೂರು ತಂಡಗಳು ಮುನ್ನಡೆ ಸಾದಿಸಿವೆ.ಮೊದಲು ನಡೆದ ಯಪ್ರಿಮನೆ ಹಾಗೂ ಕೋಳುಮುಡಿಯನ ತಂಡ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿ ಯಪ್ರಿಮನೆ ತಂಡವು 6 ವಿಕೆಟ್‍ಗೆ 42 ರನ್ ಕಲೆ ಹಾಕಿತು. ಉತ್ತರವಾಗಿ ಆಡಿದ ಕೋಳುಮುಡಿಯನ ತಂಡವು 5.3 ಓವರ್‍ನಲ್ಲಿ ಗುರಿ ಮುಟ್ಟಿ 8 ವಿಕೆಟ್‍ಗಳ ವಿಜಯ ದಾಖಲಿಸಿತು. ತಂಡದ ಪರ ಗಿರೀಶ್ 24 ರನ್ ಗಳಿಸಿದರು.

ಎರಡನೇ ಪಂದ್ಯದಲ್ಲಿ ಮರದಾಳು ತಂಡ 7 ವಿಕೆಟ್‍ಗೆ 53 ರನ್ ಗಳಿಸಿದರೆ, ಕಟ್ಟೆಕೋಡಿ ತಂಡವು 5.5. ಓವರ್‍ನಲ್ಲಿ 37 ರನ್‍ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡು ಸೋಲನು ಭವಿಸಿತು. ತಂಡದ ಪರ ಮನು ಏಕಾಂಗಿಯಾಗಿ 21 ರನ್ ಗಳಿಸಿದರು. ಮೂರನೇ ಪಂದ್ಯಾಟ ಕೇನೆರ ಹಾಗೂ ಬಿಳಿಯಂಡ್ರ ತಂಡಗಳ ನಡುವೆ ನಡೆಯಿತು. ಕೇನೆರ ತಂಡವು 5 ವಿಕೆಟ್‍ಗೆ 37 ರನ್ ಗಳಿಸಿದರೆ, ಬಿಳಿಯಂಡ್ರ ತಂಡವು ಒಂದು ವಿಕೆಟ್ ನಷ್ಟದಲ್ಲಿ ಗುರಿ ಸಾಧಿಸಿತು.