ಆಲೂರುಸಿದ್ದಾಪುರ,ಕೊಡ್ಲಿಪೇಟೆ, ಏ. 24: ಬಿಜೆಪಿ ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳು ಎಂದು ಮಾಜಿ ಸಚಿವ ಬಿ.ಎ. ಜೀವಿಜಯ ವ್ಯಂಗ್ಯವಾಡಿದ್ದಾರೆ.

ಕೊಡ್ಲಿಪೇಟೆಯಲ್ಲಿ ಆಯೋಜಿಸಿದ್ದ ಜೆಡಿಎಸ್ ಹೋಬಳಿ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು. ಎರಡೂ ಪಕ್ಷಗಳು ಕೇವಲ ಚುನಾವಣಾ ಸಂದರ್ಭದಲ್ಲಿ ಮಾತ್ರ ಮತದಾರರ ಬಳಿ ತೆರಳಿ ಮತ ಭಿಕ್ಷೆ ಬೇಡಿ ನಂತರ ಯಾವದೇ ಅಭಿವೃದ್ಧಿಯತ್ತ ಗಮನ ಹರಿಸದೆ ಕಾಲಹರಣ ಮಾಡುತ್ತಿದೆ. ಜೆಡಿಎಸ್ ಎಲ್ಲಾ ಸಂದರ್ಭದಲ್ಲೂ ಎಲ್ಲರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸವನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದೆ ಎಂದರು.

ಮುಂದಿನ ವಿಧಾನಸಭಾ ಚುನಾವಣೆಗೆ ಇಂದಿನಿಂದಲೇ ಸಜ್ಜಾಗಬೇಕಾಗಿದೆ. ರಾಜ್ಯದಲ್ಲಿ ರೈತರು, ಜನಪರ ಕಾಳಜಿ ಹೊಂದಿರುವ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡುವ ಮೂಲಕ ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಬೇಕಾಗಿದೆ ಎಂದರು. ಜಿಲ್ಲೆಯ ಎರಡೂ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸಲು ಕಾರ್ಯಕರ್ತರು ಶ್ರಮಿಸಬೇಕೆಂದರು.

ಜೆಡಿಎಸ್ ರಾಜ್ಯ ಕಾರ್ಯಕಾರಿಣಿ ಸದಸ್ಯ ಭರತ್ ಕುಮಾರ್ ಮಾತನಾಡಿ ಇಂದು ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇದಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರವೇ ನೇರ ಹೊಣೆ ಎಂದು ಆರೋಪಿಸಿದರು.

ಜಿಲ್ಲಾ ಜೆಡಿಎಸ್ ಉಸ್ತುವಾರಿ ವಿ.ಎಂ. ವಿಜಯ ಮಾತನಾಡಿ ಈ ಹಿಂದಿನ ಚುನಾವಣೆಗಳಲ್ಲಿ ಜೆಡಿಎಸ್ ಅಲ್ಪ ಮತದ ಅಂತರದಿಂದ ಸೋಲನುಭವಿಸಿದೆ. ಬಿಜೆಪಿ ಕೋಮುಗಲಭೆ ಕುತಂತ್ರದ ರಾಜಕೀಯಕ್ಕೆ ಯಾರೂ ಕಿವಿಗೊಡದೆ ದೈರ್ಯದಿಂದ ಪಕ್ಷವನ್ನು ಸಂಘಟಿಸೋಣ. ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಮುಂದಿನ ಅಭ್ಯರ್ಥಿ ಬಿ.ಎ. ಜೀವಿಜಯ ಆಗಿರುವದರಿಂದ ಎಲ್ಲಾ ಕಾರ್ಯಕರ್ತರು ಕ್ರಿಯಾಶೀಲರಾಗಿರಬೇಕು ಎಂದರು.

ಸಭೆಯಲ್ಲಿ ಸೋಮವಾರಪೇಟೆ ತಾಲೂಕು ಜೆಡಿಎಸ್ ಅಧÀ್ಯಕ್ಷ ಸುರೇಶ್, ಜಿಲ್ಲಾ ಪಂಚಾಯಿತಿ ಸದಸ್ಯ ಪುಟ್ಟರಾಜು, ತಾಲೂಕು ಪಂಚಾಯಿತಿ ಅಧÀ್ಯಕ್ಷೆ ಪುಷ್ಪ ರಾಜೇಶ್, ಜಿ.ಪಂ. ಮಾಜಿ ಅಧÀ್ಯಕ್ಷೆ ಎಚ್.ಬಿ. ಜಯಮ್ಮ, ಕೊಡ್ಲಿಪೇಟೆ ಗ್ರಾಮ ಪಂಚಾಯಿತಿ ಅಧÀ್ಯಕ್ಷೆ ಅನುಸೂಯ, ಯುವ ಘಟಕದ ವಿಶ್ವ, ತಮ್ಮಯ್ಯ, ದಿನೇಶ್, ಆದಿಲ್ ಮುಂತಾದವರಿದ್ದರು.