ಮಡಿಕೇರಿ, ಏ.26: ರಾಜಧಾನಿ ದೆಹಲಿಯ ಕರ್ನಾಟಕ ಸಂಘದಲ್ಲಿ ಇತ್ತೀಚೆಗೆ ಕೊಡವ-ಅರೆಭಾಷೆ ಸಂಭ್ರಮ ಕಾರ್ಯಕ್ರಮ ನಡೆಯಿತು. ಭಾಗಮಂಡಲದ ಅಭಿನಯ ಕಲಾಮಿಲನ ಚಾರಿಟೇಬಲ್ ಟ್ರಸ್ಟ್‍ನ ಕಲಾವಿದರ ಕೊಡಗು ಮತ್ತು ದಕ್ಷಿಣ ಕನ್ನಡದ ಗೌಡರ ಸಂಸ್ಕøತಿಯನ್ನು ಬಿಂಬಿಸುವ ಪ್ರದರ್ಶನ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಇದರಲ್ಲಿ ಕೊಡಗಿನ ಹುತ್ತರಿ, ಹರಿಸೇವೆ, ಕೈಲುಮುಹೂರ್ತ, ನಾಟಿ ಸಂಭ್ರಮ, ಭತ್ತ ನೆಡುವದು, ಸೋಬಾನೆ ಇತ್ಯಾದಿಗಳು ಮತ್ತು ದ.ಕ. ಜಿಲ್ಲೆಯ ಬಲೀಂದ್ರ ಪೂಜೆ, ಕಂಗೀಲು ಕುಣಿತ, ಚೆನ್ನುಕುಣಿತ, ಆಟಿ ಕಳೆಂಜ ಮುಂತಾದ ಕಲಾಪ್ರದರ್ಶನಗಳು ವೀಕ್ಷಕರ ಮನತಣಿಸಿತು.

ನಂತರ ಕುಶಾಲನಗರದ ಆಟಿಟ್ಯೂಡ್ ತಂಡದಿಂದ ಮನಮೋಹಕ ನೃತ್ಯಗಳು ಮೂಡಿ ಬಂದವು. ಸ್ಥಳೀಯ ಕಲಾವಿದರಿಂದ ಗಾಯನ ಕಾರ್ಯಕ್ರಮಗಳು ನಡೆಯಿತು. ಇದಕ್ಕೂ ಮುಂಚೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಸಂಘದ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೊಡಗು ಪ್ರತ್ಯೇಕತೆಯ ಕೂಗುಗಳು ನಿಲ್ಲಬೇಕೆಂದರೆ ಕೊಡಗಿನ ಬೇಡಿಕೆಗಳಿಗೆ ಸರ್ಕಾರವು ಸ್ಪಂದಿಸಬೇಕು. ಕೊಡಗಿಗೆ ವಿಶೇಷ ಪ್ರಾತಿನಿಧÀ್ಯ ನೀಡಬೇಕೆಂದು ಹೇಳಿದರು.