ಮಡಿಕೇರಿ, ಏ. 27: ಕರ್ನಾಟಕದ ಕೆಲವೆಡೆ ಮಾತ್ರವಲ್ಲದೆ ಪರರಾಜ್ಯದಲ್ಲಿ ಮನೆಕಳ್ಳತನ - ದರೋಡೆಯಂತಹ ಅಪರಾಧ ನಡೆಸಿ ಮೈಸೂರು ಸರಸ್ವತಿಪುರಂ ಪೊಲೀಸ್ ಠಾಣೆಯ ಸಿಬ್ಬಂದಿಗಳಿಂದ ಅಂತರರಾಜ್ಯದಲ್ಲಿ ಕಳ್ಳತನ ನಡೆಸಿರುವ ವ್ಯಕ್ತಿಯೋರ್ವ ಸೇರಿದಂತೆ ಮೂವರನ್ನು ಬಂಧಿಸಿರುವ ಪ್ರಕರಣ ವರದಿಯಾಗಿದೆ. ಈ ಆರೋಪಿಗಳು ರಾಜ್ಯದ ಕೊಡಗು, ಕೊಳ್ಳೆಗಾಲ, ದಿಂಡಿಗಲ್ ಮತ್ತಿತರ ಕಡೆಗಳಲ್ಲಿ ಕೃತ್ಯ ನಡೆಸಿರುವದಾಗಿ ಇಂದು ಕೆಲವು ಮಾಧ್ಯಮಗಳಲ್ಲಿ ವರದಿ ಪ್ರಕಟಗೊಂಡಿತ್ತು. ಕೊಡಗಿನಲ್ಲಿಯೂ ಹಲವಾರು ಇಂತಹ ಪ್ರಕರಣಗಳು ನಡೆದಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿನ ಮಾಹಿತಿಗೆ ಸರಸ್ವತಿಪುರಂ ಪೊಲೀಸ್ ಠಾಣೆಯನ್ನು ಇಂದು ‘ಶಕ್ತಿ' ಸಂಪರ್ಕಿಸಿದಾಗ ಈ ಕುಖ್ಯಾತ ವ್ಯಕ್ತಿಗಳು ಹಲವಾರು ಅಪರಾಧದಲ್ಲಿ ಭಾಗಿಯಾಗಿದ್ದಾರೆ. ಪ್ರಮುಖ ಆರೋಪಿ ವಿರುದ್ಧ ತಮಿಳುನಾಡಿನಲ್ಲೇ 30 ಮೊಕದ್ದಮೆ ಇವೆ. ಮೈಸೂರಿನಲ್ಲಿಯೂ ಒಂದೆರಡು ಪ್ರಕರಣಗಳು ಬೆಳಕಿಗೆ ಬಂದಿದ್ದು, ತಮಿಳುನಾಡು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಆದರೆ ಕೊಡಗಿನಲ್ಲಿ ದುಷ್ಕøತ್ಯ ನಡೆದಿರುವದು ತಿಳಿದುಬಂದಿಲ್ಲ ಎಂದು ಸರಸ್ವತಿಪುರಂ ಪೊಲೀಸ್ ಠಾಣೆಯ ಇನ್ಸ್‍ಪೆಕ್ಟರ್ ಕೊಡಗಿನವರೇ ಆದ ಕೊಕ್ಕಲೆರ ಸಿ. ಪೂವಯ್ಯ ‘ಶಕ್ತಿ'ಗೆ ಸ್ಪಷ್ಟಪಡಿಸಿದ್ದಾರೆ.