ವೀರಾಜಪೇಟೆ, ಏ. 27: ಬಿಟ್ಟಂಗಾಲ ವಿಜಯಾ ಬ್ಯಾಂಕ್ ಬಳಿಯ ಮುಖ್ಯ ರಸ್ತೆಯನ್ನು ದಾಟುತ್ತಿದ್ದಾಗ ಕಳ್ಳಿಕಂಡ ಸುಬ್ರಮಣಿ (47) ಎಂಬವರಿಗೆ ಎದುರಿನಿಂದ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮವಾಗಿ ತಲೆ ಹಾಗೂ ಎದೆ ಭಾಗಕ್ಕೆ ತೀವ್ರ ಗಾಯಗೊಂಡು ಸ್ಥಳದಲ್ಲಿಯೇ ದುರ್ಮರಣ ಗೊಂಡಿದ್ದಾರೆ.

ಮೃತ ಸುಬ್ರಮಣಿ ಖಾಸಗಿ ಬಸ್ಸಿನಲ್ಲಿ ನಿರ್ವಾಹಕನಾಗಿ ಕೆಲಸ ಮಾಡುತ್ತಿದ್ದು ಬುಧವಾರ ರಾತ್ರಿ ತನ್ನ ಕೆಲಸ ಮುಗಿಸಿ ವೀರಾಜಪೇಟೆಯಿಂದ ಗೋಣಿಕೊಪ್ಪದ ಕಡೆಗೆ ತೆರಳುತ್ತಿದ್ದ ಬಸ್ಸಿನಲ್ಲಿ ಬಿಟ್ಟಂಗಾಲಕ್ಕೆ ತೆರಳಿ ಬಸ್ಸಿನಿಂದ ಇಳಿದು ರಸ್ತೆ ದಾಟುತ್ತಿದ್ದಾಗ ಗೋಣಿಕೊಪ್ಪ ಕಡೆಯಿಂದ ಬಂದ ಸ್ವಿಫ್ಟ್ ಕಾರು (ಕೆಎ.12 ಎನ್.4686) ಡಿಕ್ಕಿಯಾಗಿದೆ. ಸುಬ್ರಮಣಿ ಸಮೀಪದ ಬಾಳುಗೋಡು ಗ್ರಾಮದ ನಿವಾಸಿಯಾಗಿದ್ದು, ಮನೆಗೆ ತೆರಳಲು ಬ್ಯಾಂಕ್ ಬಳಿ ನಿಲ್ಲಿಸಿದ್ದ ಬೈಕ್‍ನ್ನು ತೆಗೆಯಲು ರಸ್ತೆ ದಾಟುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.

ವೀರಾಜಪೇಟೆ ಗ್ರಾಮಾಂತರ ಪೊಲೀಸರು ಕಾರಿನ ಚಾಲಕ ಎಂ.ಸಾಧಿಕ್ ಎಂಬವನನ್ನು ಬಂಧಿಸಿ ಕಾರನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.

ಮೃತ ಸುಬ್ರಮಣಿ ತಾಯಿ ಜಾನಕಿ ಪೊಲೀಸರಿಗೆ ದೂರು ನೀಡಿದ್ದು, ಮೃತರಿಗೆ ಪತ್ನಿ ಇಬ್ಬರು ಮಕ್ಕಳಿದ್ದಾರೆ.