ವೀರಾಜಪೇಟೆ, ಏ. 27: ಕ್ರೀಡಾಕೂಟಗಳನ್ನು ಆಯೋಜಿಸುವ ದರಿಂದ ಹಿಂದೂ ಧರ್ಮದಲ್ಲಿ ಒಗ್ಗಟ್ಟನ್ನು ಕಾಪಾಡಿಕೊಂಡು ಧರ್ಮವನ್ನು ಉಳಿಸಲು ಸಾಧ್ಯ ಎಂದು ಬಿಜೆಪಿ ಜಿಲ್ಲಾ ಸಮಿತಿ ಉಪಾಧ್ಯಕ್ಷ ಪಟ್ರಪಂಡ ರಘು ನಾಣಯ್ಯ ಹೇಳಿದರು.

ಹಿಂದೂ ಅಗ್ನಿ ದಳದ ವತಿಯಿಂದ ವೀರಾಜಪೇಟೆ ಜೂನಿಯರ್ ಕಾಲೇಜು ಮೈದಾನದಲ್ಲಿ ಹಿಂದೂ ಬಾಂಧವರಿಗಾಗಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾಟದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಕ್ರೀಡೆಗಳಿಂದ ದೇಹದ ಶಾರೀರಿಕ ದೃಢತೆ ಹಾಗೂ ಮಾನಸಿಕವಾಗಿ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಬಲ್ಯಮೀದೇರಿರ ಸುಬ್ರಮಣಿ, ಹಿಂದೂ ಅಗ್ನಿದಳದ ಸಂಚಾಲಕ ಎನ್.ಪಿ ದಿನೇಶ್ ಮತ್ತಿತರರು ಉಪಸ್ಥಿತರಿದ್ದರು. ಕಾನೂನು ಸಲಹೆಗಾರ ಟಿ.ಪಿ ಕೃಷ್ಣ ಸ್ವಾಗತಿಸಿದರು.

ಮಾಜಿ ಕ್ರಿಕೆಟ್ ಆಟಗಾರ ಪಾಲೇಕಂಡ ಮನು ಚಂಗಪ್ಪ ಬ್ಯಾಟಿಂಗ್ ಮಾಡಿ ಪಂದ್ಯಾಟವನ್ನು ಉದ್ಘಾಟಿಸಿದರು.