ಸಿದ್ದಾಪುರ, ಏ. 28: ವಿದ್ಯುತ್ ಸ್ಪರ್ಶದಿಂದ ಮನೆಗೆ ಬೆಂಕಿ ತಗಲಿ ನಗದು ಸೇರಿದಂತೆ ದಾಖಲೆಗಳು ಸುಟ್ಟು ಹೋಗಿರುವ ಘಟನೆ ಸಿದ್ದಾಪುರದ ಮಾರುಕಟ್ಟೆ ಬಳಿ ನಡೆದಿದೆ. ಇಲ್ಲಿನ ಮಾರ್ಕೆಟ್ ಬಳಿಯ ನಿವಾಸಿ ನಾರಾಯಣಕುಟ್ಟಿ ಎಂಬವರ ಪುತ್ರ ಸುಬ್ರಮಣಿ ಅವರು ಗುರುವಾರದಂದು ರಾತ್ರಿ ಮನೆಯಲ್ಲಿ ದೇವರ ಫೋಟೊ ಸ್ಟಾಂಡ್‍ನಲ್ಲಿ ದೀಪಹಚ್ಚಿ ಅವರ ತಂದೆಯ ಮನೆ ಅಂಬೇಡ್ಕರ್ ನಗರಕ್ಕೆ ತೆರಳಿದ್ದರು ಎನ್ನಲಾಗಿದೆ. ಈ ಸಂದರ್ಭ ರಾತ್ರಿ 9 ಗಂಟೆಯ ಸಮಯಕ್ಕೆ ದೀಪದ ಮೇಲಿದ್ದ ಬಲ್ಬ್‍ಗೆ ಅಳವಡಿಸಿದ್ದ ವಿದ್ಯುತ್ ವಯರ್‍ಗೆ ಬೆಂಕಿ ತಗಲಿ ವಿದ್ಯುತ್ ಸ್ಪರ್ಶವಾಗಿದೆ.

ಕೋಣೆಯ ಒಳಗಡೆ ಇದ್ದ ಬೀರುವಿನ ಕಪಾಟುವಿನಲ್ಲಿಟ್ಟಿದ್ದ ನಗದು ರೂ. 20,000 ಹಾಗೂ ಸುಬ್ರಮಣಿ ಅವರ ತಾಯಿ ಹಾಗೂ ಪತ್ನಿ ಮಕ್ಕಳ ಆಧಾರ್ ಕಾರ್ಡ್, ಗುರುತಿನ ಚೀಟಿ ಸೇರಿದಂತೆ ಇತರೆ ಪ್ರಮುಖ ದಾಖಲೆಗಳು ಹಾಗೂ ಬಟ್ಟೆಗಳು ಮತ್ತು ಬೆಡ್‍ಗಳು ಬೆಂಕಿಗೆ ಸಿಲುಕಿ ಆಹುತಿ ಆಗಿದೆ. ನೆರೆಮನೆ ನಿವಾಸಿಗಳು ಸೇರಿ ನೀರು ಸುರಿದು ಬೆಂಕಿ ನಂದಿಸಿದ್ದಾರೆ. ಬೆಂಕಿಯ ಜ್ವಾಲೆ ಸಮೀಪದ ಮನೆಗಳಿಗೆ ಹರಡಿ ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ. ಘಟನೆಯಿಂದಾಗಿ ರೂ. 1 ಲಕ್ಷ ನಷ್ಟ ಸಂಭವಿಸಿದೆ ಎಂದು ಸುಬ್ರಮಣಿ ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

-ವಾಸು