ಕುಶಾಲನಗರ, ಏ. 30: ಕುಶಾಲನಗರದಲ್ಲಿ ವಿಶೇಷ ತಹಶೀಲ್ದಾರ್ ಕಚೇರಿ ಸದ್ಯದಲ್ಲಿಯೇ ಪ್ರಾರಂಭಗೊಳ್ಳಲಿದೆ ಎಂದು ಉಪ ತಹಶೀಲ್ದಾರ್ ನಂದಕುಮಾರ್ ತಿಳಿಸಿದ್ದಾರೆ. ಸರಕಾರದಿಂದ ಈಗಾಗಲೇ ಆದೇಶ ಹೊರಬಿದ್ದಿದ್ದು ಪ್ರಸಕ್ತ ನಾಡ ಕಚೇರಿಯಲ್ಲಿ ನೂತನ ತಹಶೀಲ್ದಾರ್ ಕಛೇರಿ ಕಾರ್ಯನಿರ್ವಹಿಸಲಿದೆ.

ಈ ಮೂಲಕ ಕುಶಾಲನಗರ ಹೋಬಳಿ ನಾಗರೀಕರು ತಮ್ಮ ದೈನಂದಿನ ಕಾರ್ಯಗಳಿಗಾಗಿ ತಾಲೂಕು ಕೇಂದ್ರಕ್ಕೆ ಅಲೆದಾಡುವ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿದಂತಾಗಿದೆ. ಕುಶಾಲನಗರ ಪಟ್ಟಣದಲ್ಲಿ ಉಪ ನೋಂದಣಿ ಅಧಿಕಾರಿ ಕಛೇರಿ ಕೂಡ ಮಂಜೂರಾಗಿದ್ದು ಇಲಾಖೆಯ ಅಧಿಕಾರಿಗಳು ನೂತನ ಕಛೇರಿಗಾಗಿ ಹುಡುಕಾಟದಲ್ಲಿ ತೊಡಗಿದ್ದಾರೆ. ಸ್ಥಳೀಯ ನೀರಾವರಿ ನಿಗಮಕ್ಕೆ ಸೇರಿದ ಕಛೇರಿಯ ಕಟ್ಟಡದಲ್ಲೇ ಉಪ ನೋಂದಣಿ ಕಛೇರಿ ಪ್ರಾರಂಭಿಸಲು ಪರಿಶೀಲನೆ ನಡೆದಿದೆ. ಈ ನಿಟ್ಟಿನಲ್ಲಿ ಇಲಾಖಾ ಅಧಿಕಾರಿಗಳ ತಂಡ ಕ್ರಮಕೈಗೊಳ್ಳುತ್ತಿದ್ದು ಸದ್ಯದಲ್ಲಿಯೇ ಈ ಕಛೇರಿ ಕೂಡ ಪ್ರಾರಂಭಗೊಳ್ಳಲಿದೆ ಎಂದು ನಂದಕುಮಾರ್ ಮಾಹಿತಿ ನೀಡಿದ್ದಾರೆ.