ಸೋಮವಾರಪೇಟೆ, ಮೇ 3: ಶುಂಠಿ ಬೀಜ ತರಲೆಂದು ಸ್ನೇಹಿತನ ಹೊಲಕ್ಕೆ ಹೋಗಿದ್ದ ಯುವಕನ ಮೇಲೆ ಸ್ನೇಹಿತನ ಚಿಕ್ಕಪ್ಪ ಹಾಗೂ ಚಿಕ್ಕಮ್ಮ ಹಲ್ಲೆ ನಡೆಸಿರುವ ಘಟನೆ ತಾಲೂಕಿನ ಭುವಂಗಾಲ ಗ್ರಾಮದಲ್ಲಿ ನಡೆದಿದ್ದು, ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.

ನೇಗಳ್ಳೆ ಕರ್ಕಳ್ಳಿ ಗ್ರಾಮದ ದಿವಾಕರ್ ಎಂಬವರು ತನ್ನ ಸ್ನೇಹಿತ ಸುದೀಪ್ ಅವರ ಮನೆ ಭುವಂಗಾಲಕ್ಕೆ ನಿನ್ನೆ ತೆರಳಿದ್ದು, ಇಂದು ಬೆಳಿಗ್ಗೆ ಆತನ ಹೊಲಕ್ಕೆ ಹೋಗಿ ವಾಪಸ್ ಬರುತ್ತಿದ್ದ ಸಂದರ್ಭ ಸುದೀಪನ ಚಿಕ್ಕಪ್ಪ ರಾಜಣ್ಣ ಮತ್ತು ಆತನ ಪತ್ನಿ ಮಣಿ ಅವರುಗಳು ಅವಾಚ್ಯ ಶಬ್ದಗಳಿಂದ ನಿಂದಿಸಿ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ನಂತರ ರಾಜಣ್ಣ ಅವರು ಮನೆಯೊಳಗಿದ್ದ ಕತ್ತಿಯನ್ನು ತಂದು ಕೊಲೆ ಮಾಡುವದಾಗಿ ಬೆದರಿಕೆ ಹಾಕಿದ್ದು, ಈ ಬಗ್ಗೆ ದೊರೆತ ದೂರನ್ನು ದಾಖಲಿಸಿಕೊಂಡಿರುವ ಪೊಲಿಸರು ತನಿಖೆ ಕೈಗೊಂಡಿದ್ದಾರೆ. ಗಾಯಾಳು ದಿವಾಕರ್ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.