ಸಿದ್ದಾಪುರ, ಮೇ 3: ದಿಡ್ಡಳ್ಳಿಯ ಈ ಹಿಂದೆ ತೆರವುಗೊಳಿಸಿದ ಅರಣ್ಯ ಪ್ರದೇಶದಲ್ಲಿ ಮತ್ತೆ ಆದಿವಾಸಿಗಳು ಗುಡಿಸಲು ನಿರ್ಮಿಸಿಕೊಂಡಿದ್ದಾರೆ. ಈ ಹಿಂದೆ ಅರಣ್ಯದಲ್ಲಿ ಗುಡಿಸಲು ನಿರ್ಮಿಸಿ ತೆರವುಗೊಳಿಸಿದ ಪ್ರದೇಶದಲ್ಲಿ ಮತ್ತೆ ಆದಿವಾಸಿಗಳು ಗುಡಿಸಲು ನಿರ್ಮಿಸಿದ್ದು, ಅಕ್ರಮ ಪ್ರವೇಶ ಮಾಡಿ ಗುಡಿಸಲು ನಿರ್ಮಿಸಿರುವ ಗುಡಿಸಲು ತೆರವಿಗೆ ಅರಣ್ಯ ಇಲಾಖೆ ಹಾಗೂ ಪೊಲೀಸರು ಸಜ್ಜು ಗೊಂಡಿದ್ದಾರೆ. ಬುಧವಾರ ಬೆಳಗ್ಗಿನ ಜಾವ ಸುಮಾರು 60 ಗುಡಿಸಲು ಗಳನ್ನು ಅರಣ್ಯ ಪ್ರದೇಶದಲ್ಲಿ ಏಕಾಏಕಿ ನಿರ್ಮಾಣ ಮಾಡಿದ್ದು, ಆದಿವಾಸಿಗಳು ಇಲ್ಲಿಂದ ತೆರಳುವದಿಲ್ಲ ಎಂದು
ಪಟ್ಟು ಹಿಡಿದಿದ್ದಾರೆ. ಮಡಿಕೇರಿ ಡಿ.ವೈ.ಎಸ್.ಪಿ ಛಬ್ಬಿ ಹಾಗೂ ಅರಣ್ಯ ಇಲಾಖೆಯ ವೀರಾಜಪೇಟೆ ವಲಯ ಉಪ ಸಂರಕ್ಷಣಾಧಿಕಾರಿ ಮರಿಯ ಕೃಷ್ಟರಾಜ್, ಎ.ಸಿ.ಎಫ್ ಶ್ರೀಪತಿ ಆದಿವಾಸಿಗಳ
(ಮೊದಲ ಪುಟದಿಂದ) ಮನವೊಲಿಕೆಗೆ ಮುಂದಾಗಿದ್ದು, ಮುತ್ತಮ್ಮ ಹಾಗೂ ಇನ್ನಿತರರ ಬಳಿ ಮೀಸಲು ಅರಣ್ಯದಲ್ಲಿ ಅಕ್ರಮವಾಗಿ ನಿರ್ಮಿಸಿಕೊಂಡಿರುವ ಗುಡಿಸಲು ಗಳಿಂದ ಹೊರಬರು ವಂತೆಯೂ, ಈಗಾಗಲೇ ಸರಕಾರದ ವತಿಯಿಂದ ಜಿಲ್ಲಾಡಳಿತದ ಮುಖಾಂತರ ಗುರುತಿಸಿರುವ ಸ್ಥಳಕ್ಕೆ ತೆರಳುವಂತೆ ಮನವಿ ಮಾಡಲಾಯಿತು. ಆದರೆ ಇದನ್ನು ತಿರಸ್ಕರಿಸಿದ ಆದಿವಾಸಿಗಳು ತಮಗೆ ಇಲ್ಲಯೇ ನಿವೇಶನ ನೀಡಲಿ. ಇಲ್ಲವಾದರೆ ಇಲ್ಲಿಯೇ ಸಾಯುತ್ತೇವೆ ಎಂದರಲ್ಲದೇ, ದಿಡ್ಡಳ್ಳಿಯಿಂದ ಕದಲುವದಿಲ್ಲ. ಲಾಠಿ ಬೀಸಿದರೂ ಹೆದರುವದಿಲ್ಲ. ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಬೆದರಿಕೆ ಒಡ್ಡಿದರು. ಡಿ.ಎಫ್.ಓ ಮರಿಯ ಕೃಷ್ಟರಾಜ್ ಮಾತನಾಡಿ, ಮೀಸಲು ಅರಣ್ಯದಲ್ಲಿ ಏಕಾಏಕಿ ಅಕ್ರಮ ಪ್ರವೇಶ ಮಾಡಿ ಕಾನೂನು ಬಾಹಿರವಾಗಿ ಗುಡಿಸಲು ಕಟ್ಟಿಕೊಂಡಿರುವದು ಸರಿಯಾದ ಕ್ರಮವಲ್ಲ. ದಿಡ್ಡಳ್ಳಿಯ ಜಾಗವು ಪೈಸಾರಿ ಜಾಗವಲ್ಲ. ಅರಣ್ಯ ಇಲಾಖೆಯ ಬಳಿ ಅರಣ್ಯ ಜಾಗವೆಂಬ ದಾಖಲೆಗಳಿದ್ದು, ತಾವು ಕೂಡಲೇ ಅರಣ್ಯದಿಂದ ಗುಡಿಸಲು ತೆರವುಗೊಳಿಸುವಂತೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜೆ.ಕೆ. ಮುತ್ತಮ್ಮ ಅರಣ್ಯ ಪ್ರದೇಶದಲ್ಲಿ ನಾವು ಕಳೆದ ಹಲವು ತಿಂಗಳಿಂದ ವಾಸವಿದ್ದು, ದಿಡ್ಡಳ್ಳಿಯ ಜಾಗ ಅರಣ್ಯ ಪೈಸಾರಿ ಎಂಬದರ ಬಗ್ಗೆ ನಮ್ಮಲ್ಲಿ ದಾಖ¯ Éಗಳಿವೆ. ಅರಣ್ಯ ಇಲಾಖೆ ಯಿಂದ ದಾಖಲೆಗಳನ್ನು ತರುವಂತೆ ಒತ್ತಾಯಿಸಿದರು.
ಪೊಲೀಸ್ ಭದ್ರತೆ : ಅರಣ್ಯ ಪ್ರದೇಶದಲ್ಲಿ ಗುಡಿಸಲು ನಿರ್ಮಾಣ ಮಾಡಿ ಉದ್ರಿಗ್ನ ಪರಿಸ್ಥಿತಿ ನಿರ್ಮಾಣವಾಗುವ ಸಾದ್ಯತೆ ಇರುವ ಹಿನ್ನೆಲೆಯಲ್ಲಿ ಗುಡಿಸಲು ತೆರವು ಗೊಳಿಸಲು ಪೊಲೀಸ್ ಇಲಾಖೆಯ 80 ಕ್ಕೂ ಅಧಿಕ ಪೊಲೀಸರು ಹಾಗೂ 40 ಕ್ಕೂ ಅಧಿಕ ಅರಣ್ಯ ಸಿಬ್ಬಂದಿಗಳು ದಿಡ್ಡಳ್ಳಿಯಲ್ಲಿ ಬೀಡುಬಿಟ್ಟಿದ್ದಾರೆ. ಮಡಿಕೇರಿ ಡಿ.ವೈ.ಎಸ್.ಪಿ ಛಬ್ಬಿ ನೇತೃತ್ವದಲ್ಲಿ ಸಿದ್ದಾಪುರ ಠಾಣಾಧಿಕಾರಿ ಸುಬ್ರಮಣ್ಯ ಸ್ಥಳದಲ್ಲಿ ಬೀಡು ಬಿಟ್ಟಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಿದ್ದಾರೆ.
ಮೊಕದ್ದಮೆ : ಮೀಸಲು ಅರಣ್ಯದಲ್ಲಿ ಅಕ್ರಮ ಗುಡಿಸಲು ನಿರ್ಮಿಸಿಕೊಂಡಿರುವ ಆರೋಪದಡಿ ಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳ ಕರ್ತವ್ಯಕ್ಕೆ ಹಾಗೂ ಅಕ್ರಮ ಪ್ರವೇಶ ಹಾಗೂ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಅರಣ್ಯ ಅಧಿಕಾರಿಗಳು ಸಿದ್ದಾಪುರ ಪೊಲೀಸ್ ಠಾಣೆಗೆ ಪುಕಾರು ನೀಡಿದ ಮೇರೆಗೆ ಜೆ.ಕೆ ಅಪ್ಪಾಜಿ, ಜೆ.ಕೆ ಮುತ್ತಮ್ಮ, ಅಪ್ಪು, ಮುತ್ತ ಹಾಗೂ ಮಲ್ಲ ಸೇರಿದಂತೆ ಇನ್ನಿತರರ ವಿರುದ್ಧ ಪ್ರಕರಣ ದಾಖಲಾಗಿದೆ.