ಸುಂಟಿಕೊಪ್ಪ, ಮೇ 3: ಇಲ್ಲಿಗೆ ಸಮೀಪದ ಪನ್ಯದಲ್ಲಿ ಧರ್ಮ ದೈವ ಪಂಜುರ್ಲಿ,ಶ್ರೀ ಪಾಷಾಣ ಮೂರ್ತಿ, ಶ್ರೀಗುಳಿಗ ಮತ್ತು ಕೊರಗಜ್ಜ ನೇಮೋತ್ಸವವು ಶ್ರದ್ಧಾಭಕ್ತಿಯಿಂದ ನಡೆಯಿತು.

ಗಣಹೋಮದೊಂದಿಗೆ ಪ್ರಾರಂಭವಾದ ಪೂಜಾ ಕೈಂಕರ್ಯಗಳು ಸತ್ಯ ನಾರಾಯಣ ಪೂಜೆ ಮತ್ತಿತರ ಸೇವೆಗಳು ಜರುಗಿದವು. ರಾತ್ರಿ ಭಂಡಾರ ತೆಗೆದ ನಂತರ ನೇಮಕ್ಕೆ ಚಾಲನೆ ದೊರೆತು, ಪಾಷಾಣ ಮೂರ್ತಿ ಮತ್ತು ಪಂಜುರ್ಲಿ ದೈವಗಳ ಕೋಲಗಳು ನಡೆದವು. ಭಕ್ತಾದಿಗಳು ಹರಕೆ ಒಪ್ಪಿಸಿದರು. ನೆರೆದವರಿಗೆ ಅನ್ನಸಂತರ್ಪಣೆ ನಡೆಯಿತು. ಗುಳಿಗನ ಕೋಲ ಮತ್ತು ಕೊರಗಜ್ಜ ನೇಮಗಳು ನಡೆದವು. ಸುಂಟಿಕೊಪ್ಪ, ಸುತ್ತಮುತ್ತಲಿನಿಂದ ನೂರಾರು ಭಕ್ತರು ಆಗಮಿಸಿ ದೈವದ ದರ್ಶನ ಪಡೆದುಕೊಂಡರು.

ಧರ್ಮ ದೈವದ ನೇಮೋತ್ಸವದ ಸಂಘಟಕರಾದ ಮೋಣಪ್ಪ ಪೂಜಾರಿ, ಜಿನ್ನಪ್ಪ ಪೂಜಾರಿ, ಕೆ.ಪಿ. ಜಗನ್ನಾಥ್, ಡಾ. ಯಶೋಧರ್ ಪೂಜಾರಿ, ದೇವಪ್ಪ, ಜಗದೀಶ್, ಮಣಿಮುಖೇಶ್ ಇತರರು ಇದ್ದರು.