ಶನಿವಾರಸಂತೆ, ಮೇ 3: ನಿಡ್ತ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಳ್ಳಿ ಗ್ರಾಮದ ನಿವಾಸಿ ರುದ್ರಯ್ಯ ಎಂಬವರ ಮನೆಯ ಕಿಟಕಿ ಹಾಗೂ ಗೋಡೆ ಒಡೆದು ಕಳ್ಳರು ಒಳ ನುಗ್ಗಿ ಮನೆಯಲ್ಲಿದ್ದ ರೂ. 1.20 ಲಕ್ಷ ಮೌಲ್ಯದ ಸಾಮಗ್ರಿ, ಒಡವೆ, ವಸ್ತ್ರಗಳನ್ನು ಕಳವು ಮಾಡಿರುವ ಪ್ರಕರಣ ನಡೆದಿದೆ.

ರುದ್ರಯ್ಯ ಅವರು ಕುಟುಂಬದೊಂದಿಗೆ ಭಾನುವಾರ ತಮ್ಮ ಸಂಬಂಧಿಕರ ಮನೆಗೆ ಹೋಗಿದ್ದು, ತಾ. 2ರಂದು ಬಂದು ನೋಡುವಾಗ ಯಾರೋ ಕಳ್ಳರು ಮನೆಯ ಕಿಟಕಿ ಹಾಗೂ ಗೋಡೆಯನ್ನು ಒಡೆದು ಮನೆಯ ಒಳನುಗ್ಗಿ ಮನೆಯಲ್ಲಿದ್ದ ಬಾಂಡ್, ಟಿ.ವಿ., ಮಂಚ, ಗ್ಯಾಸ್ ಸಿಲಿಂಡರ್, ಸ್ಟೌವ್, ಕಬ್ಬಿಣದ ಬೀರು, ಬೀರುವಿನಲ್ಲಿದ್ದ ರೇಷ್ಮೆ ಸೀರೆ ಹಾಗೂ ಇತರ ಸೀರೆ, ಚಿನ್ನದ ಓಲೆ, ಜುಮುಕಿ, 5 ಉಂಗುರಗಳನ್ನು ಕಳವು ಮಾಡಿಕೊಂಡು ಹೋಗಿರುವದು ಗೋಚರಿಸಿದೆ. ಈ ಬಗ್ಗೆ ನೀಡಿದ ದೂರಿನ ಮೇರೆ ಶನಿವಾರಸಂತೆ ಪೊಲೀಸ್ ಠಾಣಾಧಿಕಾರಿ ಹೆಚ್.ಎಂ. ಮರಿಸ್ವಾಮಿ ವಿಧಿ 454, 457, 380 ಐ.ಪಿ.ಸಿ. ರೀತ್ಯಾ ಪ್ರಕರಣ ದಾಖಲಿಸಿ ಮಡಿಕೇರಿಯ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ತಾ. 3ರಂದು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.