ಶನಿವಾರಸಂತೆ, ಮೇ 6: ವಿಶ್ವ ಹಿಂದೂ ಪರಿಷದ್ ಬಜರಂಗದಳ ಹೊಸೂರು ನೂತನ ಘಟಕದ ವತಿಯಿಂದ ಬೆಳಿಗ್ಗೆ 11 ಗಂಟೆಗೆ ಶನಿವಾರಸಂತೆಯ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ ಬನ್ನಿ ಮಂಟಪದಿಂದ ಸುಮಾರು 6 ಕಿ.ಮೀ. ದೂರದ ಹೊಸೂರಿನ ಶ್ರೀ ಬೆಟ್ಟದ ಬಸವೇಶ್ವರ ದೇವಸ್ಥಾನದ ಆವರಣದವರೆಗೆ ಚತುಷ್ಚಕ್ರ ಹಾಗೂ ದ್ವಿಚಕ್ರ ವಾಹನಗಳಲ್ಲಿ ಭಗವಧ್ವಜದೊಂದಿಗೆ ಕಾರ್ಯಕರ್ತರು ಜಾಥಾ ಸಾಗಿದರು.

ನೂತನ ಘಟಕದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೊಸೂರು ಗ್ರಾಮ ಪಂಚಾಯಿತಿ ಸದಸ್ಯ ಪುಟ್ಟಸ್ವಾಮಿಗೌಡ ವಹಿಸಿದ್ದರು.

ಕರ್ನಾಟಕ ದಕ್ಷಿಣ ಪ್ರಾಂತ ಸಹ ಸಂಯೋಜಕ ರಘು ಸಕಲೇಶಪುರ ಮಾತನಾಡಿ, ಹಿಂದೂಗಳು ಮನಸ್ಸು ಮಾಡಿದರೆ ಜಾಗತಿಕ ಭಯೋತ್ಪಾದನೆ ಹಾಗೂ ಮತಾಂತರ, ಗೋಹತ್ಯೆ ತಡೆಗಟ್ಟುವದು ಸಾಧ್ಯ ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಝರಿನಾ ಮಂಜುನಾಥ, ಹಾಸನದ ಭಜರಂಗದಳದ ಜಿಲ್ಲಾ ಸಂಚಾಲಕ ವಿಜಯಕುಮಾರ್, ದೇವಸ್ಥಾನದ ಸೇವಾ ಸಮಿತಿಯ ಅಧ್ಯಕ್ಷ ಟಿ.ಎಸ್. ಶಾಂತಮಲ್ಲಪ್ಪ, ಕೌಕೋಡಿ ಕಿರಣ್, ಟಿ.ಎಂ. ಜಗದೀಶ್, ಹೆಚ್.ಕೆ. ಸಾಗರ್, ಇತರರು ಉಪಸ್ಥಿತರಿದ್ದರು.