ಕುಶಾಲನಗರ, ಮೇ 6: ರಾಜ್ಯ ಸರಕಾರ ಹಿಂದೂಗಳನ್ನು ನಾಶಗೊಳಿಸುವ ವ್ಯವಸ್ಥಿತ ಷಡ್ಯಂತ್ರ ಹೂಡುತ್ತಿದ್ದು ಜನ ಸಿಡಿದೇಳುವದು ಖಚಿತ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಎಚ್ಚರಿಸಿದ್ದಾರೆ.

ಕುಶಾಲನಗರ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಸರಕಾರ ಹಿಂದೂ ವಿರೋಧಿ ಸರಕಾರವಾಗಿದೆ. 4 ವರ್ಷಗಳಿಂದ ರಾಜ್ಯದಲ್ಲಿ 9 ಹಿಂದೂ ನಾಯಕರ ಹತ್ಯೆ ನಡೆದಿದೆ. ಸರಕಾರ ಇದಕ್ಕೆ ಪರೋಕ್ಷ ಪ್ರೋತ್ಸಾಹ ನೀಡಿದೆ ಎಂದು ಆರೋಪಿಸಿದರು.

ಸರಕಾರ ಮಾಡಬೇಕಾದ ಕೆಲಸವನ್ನು ಹಿಂದೂ ಸಮುದಾಯದ ಜನತೆ ಮಾಡಿದ ಸಂದರ್ಭ ಅವರ ಮೇಲೆ ದೌರ್ಜನ್ಯ ನಡೆಸುತ್ತಿದೆ. ಗೋಹತ್ಯಾ ನಿಷೇಧÀದ ವಿರುದ್ಧ ಹೇಳಿಕೆ ನೀಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರ ಗೋರಕ್ಷಕರ ಮೇಲೆ ಕ್ರಮಕೈಗೊಳ್ಳುತ್ತಿದೆ. ಇಂದು ಹಂತಹಂತವಾಗಿ ಹಿಂದೂಗಳನ್ನು ನಾಶಗೊಳಿಸುವ ತಂತ್ರವಾಗಿದೆ ಎಂದು ತಿಳಿಸಿದರು.

ಹಿಂದೂಗಳ ಹಬ್ಬಗಳನ್ನು ಆಚರಿಸಬೇಕಾದಲ್ಲಿ ಸರಕಾರದ ಅನುಮತಿ ಪಡೆಯಬೇಕಾದ ದುಸ್ಥಿತಿ ಉಂಟಾಗಿದ್ದು ಧಾರ್ಮಿಕ ಮೆರವಣಿಗೆಗಳ ಮೇಲೆ ನಿರ್ಬಂಧ ಹೇರುತ್ತಿದೆ. ಹಿಂದೂ ಸಮಾಜೋತ್ಸವಗಳಿಗೆ ಸಾವಿರ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಿ ಜನರ ಹಕ್ಕುಗಳನ್ನು ಮೊಟಕುಗೊಳಿಸುತ್ತಿದೆ ಎಂದರು.

ಮುಂದಿನ ಚುನಾವಣೆಯಲ್ಲಿ ಶ್ರೀರಾಮ ಸೇನೆಯ 20 ಕ್ಕೂ ಅಧಿಕ ಅಭ್ಯರ್ಥಿಗಳು ವಿಧಾನಸಭಾ ಚುನಾವಣೆ ಎದುರಿಸಲು ಸಿದ್ಧರಾಗಿದ್ದಾರೆ.

ತಾನು ಕೂಡ ಮುಂದಿನ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸುವದಾಗಿ ಪ್ರತಿಕ್ರಿಯಿಸಿದ್ದಾರೆ. ಯಾವದೇ ಸಮಾಜ ಸೇವೆಗಳಿಗೆ ರಾಜಕೀಯ ವ್ಯವಸ್ಥೆ ತಡೆಯೊಡ್ಡುತ್ತಿದ್ದು, ಇದಕ್ಕೆ ರಾಜಕೀಯ ಶಕ್ತಿ ಅವಶ್ಯಕತೆಯಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಸಂದರ್ಭ ಕುಶಾಲನಗರ ನಗರ ಬಿಜೆಪಿ ಅಧ್ಯಕ್ಷ ಕೆ.ಜಿ. ಮನು, ಪ್ರಮುಖರಾದ ಎಂ.ಡಿ. ಕೃಷ್ಣಪ್ಪ, ಭಾಸ್ಕರ್ ನಾಯಕ್, ನಿಡ್ಯಮಲೆ ದಿನೇಶ್, ಮಂಜುನಾಥ್, ಅಮೃತ್‍ರಾಜ್, ವೈಶಾಖ್ ಮತ್ತಿತರರು ಇದ್ದರು.