ಸೋಮವಾರಪೇಟೆ, ಮೇ.7: ಜೀವನದಲ್ಲಿ ಜಿಗುಪ್ಸೆಗೊಂಡು ಮಹಿಳೆಯೋರ್ವರು ಸಾರ್ವಜನಿಕ ಬಾವಿಗೆ ಬಿದ್ದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಆಲೆಕಟ್ಟೆ ರಸ್ತೆಯಲ್ಲಿ ಸಂಭವಿಸಿದೆ.

ಆಲೆಕಟ್ಟೆ ನಿವಾಸಿ ಭಾಗ್ಯ(55) ಎಂಬವರೇ ಆತ್ಮಹತ್ಯೆಗೆ ಶರಣಾದವರಾಗಿದ್ದು, ಇವರ ಪುತ್ರ ರಂಜಿತ್ ಕಳೆದ ನಾಲ್ಕು ತಿಂಗಳ ಹಿಂದೆ ಅನಾರೋಗ್ಯದಿಂದ ಇಹಲೋಕ ತ್ಯಜಿಸಿದ್ದ. ನಂತರ ತಾಯಿಯ ಮನೆಯಲ್ಲಿ ಸಹೋದರಿಯರೊಂದಿಗೆ ನೆಲೆಸಿದ್ದ ಭಾಗ್ಯ ಪುತ್ರ ಶೋಕದಿಂದ ನೊಂದಿದ್ದರು ಎನ್ನಲಾಗಿದೆ.

‘ಮಗನೇ ಹೋದ ಮೇಲೆ ನಾನ್ಯಾಕೆ ಬದುಕಿರಲಿ’ ಎಂದು ಆಗಾಗ್ಗೆ ಸಂಬಂಧಿಕರೊಂದಿಗೆ ಹೇಳುತ್ತಿದ್ದ ಭಾಗ್ಯ ಇಂದು ಮಧ್ಯಾಹ್ನ ಆಲೆಕಟ್ಟೆ ರಸ್ತೆಯ ಬದಿಯಲ್ಲಿರುವ ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಸ್ಥಳಕ್ಕೆ ಸೋಮವಾರಪೇಟೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ತೆರಳಿ ಮೃತದೇಹವನ್ನು ಮೇಲೆ ತೆಗೆದಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ತೆರಳಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಸ್ಥಳೀಯರ ಆಕ್ರೋಶ: ಆಲೇಕಟ್ಟೆ ರಸ್ತೆಯ ಪದ್ಮಕ್ಯಾಂಟೀನ್ ಬಳಿಯಿರುವ ಈ ನಿರುಪಯುಕ್ತ ಬಾವಿಯನ್ನು ಮುಚ್ಚುವಂತೆ ಈ ಹಿಂದೆಯೇ ಆಗ್ರಹಿಸಿದ್ದರೂ ಪಂಚಾಯಿತಿಯವರು ಯಾವದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಕೆಲವರು ಮೃತದೇಹವನ್ನು ಬಾವಿಯಿಂದ ಹೊರತೆಗೆದ ನಂತರ ಬಾವಿಯ ಕಟ್ಟೆಯನ್ನು ಒಡೆದು ಹಾನಿಗೊಳಿಸಿದರು. ಸಾರ್ವಜನಿಕ ಬಾವಿಯ ಕಟ್ಟೆಯನ್ನು ಹಾರೆ, ಪಿಕಾಸಿಗಳಿಂದ ಒಡೆಯಲು ಮುಂದಾದ ಕೆಲವರು ಇವರುಗಳ ಆಕ್ರೋಶ ತಣ್ಣಗಾದ ನಂತರ ಹಾರೆ, ಪಿಕಾಸಿಗಳೊಂದಿಗೆ ಮನೆಗೆ ಮರಳಿದರು.