ಕುಶಾಲನಗರ, ಮೇ 8: ಸಾಕಷ್ಟು ನಿರೀಕ್ಷೆ ಮೂಡಿಸಿದ್ದ ಮೈಸೂರು-ಕುಶಾಲನಗರ ರೈಲ್ವೆ ಮಾರ್ಗದ ಕನಸು ಇದೀಗ ಮತ್ತೆ ಹಳಿ ತಪ್ಪುತ್ತಿದೆ. ಅಂದಾಜು 100 ಕಿ.ಮೀ. ಅಂತರದ ಈ ಮಾರ್ಗಕ್ಕೆ ಕಳೆದ 6 ವರ್ಷಗಳಿಂದ ಹಲವು ತೊಡಕುಗಳು ಬರುತ್ತಿದ್ದು, ಈ ಯೋಜನೆಯನ್ನು ರೈಲ್ವೆ ಇಲಾಖೆ ಕೈಬಿಟ್ಟಂತೆ ಕಂಡುಬರುವದರೊಂದಿಗೆ ಕೊಡಗಿನ ಜನರ ರೈಲು ಪ್ರಯಾಣದ ಕನಸಿಗೆ ತಣ್ಣೀರು ಎರಚಿದಂತಾಗಿದೆ ಎನ್ನಬಹುದು. ಈ ಹೊಸ ರೈಲು ಮಾರ್ಗ ಯೋಜನೆ ಸಂಬಂಧ 2011 ರಲ್ಲಿ ರೈಲ್ವೆ ಇಲಾಖೆ ಸರ್ವೆ ಕಾರ್ಯ ಕೈಗೊಂಡಿತ್ತು. ಮೈಸೂರು-ಕುಶಾಲನಗರ ರೈಲ್ವೆ ಯೋಜನೆಗೆ ರೂ. 600 ಕೋಟಿ ವೆಚ್ಚವಾಗಲಿದೆ ಎನ್ನುವ ಅಂದಾಜು ಪಟ್ಟಿ ಕೂಡ ಸಲ್ಲಿಸಲಾಗಿತ್ತು. ಈ ನಡುವೆ 2012 ರಲ್ಲಿ ಅಂದಿನ ರೈಲ್ವೆ ಸಚಿವರಾಗಿದ್ದ ಕೆ.ಹೆಚ್. ಮುನಿಯಪ್ಪ ಯೋಜನೆಗೆ ಶಂಕುಸ್ಥಾಪನೆ ಕೂಡ ನೆರವೇರಿಸಿ ಕೆಲವೇ ವರ್ಷಗಳಲ್ಲಿ ರೈಲು ಬರುವದಾಗಿ ಸಾರ್ವಜನಿಕರಿಗೆ ಭರವಸೆ ಕೂಡ ನೀಡಿದ್ದರು.

ಇದೀಗ ಮೈಸೂರಿನಿಂದ ಕುಶಾಲನಗರಕ್ಕೆ ರೂ. 600 ಕೋಟಿ ವೆಚ್ಚ ಮಾಡಿ ರೈಲು ಮಾರ್ಗ ರೂಪಿಸಿದರೆ ಬೆಳಗೋಳದಿಂದ ಹುಣಸೂರು, ಪಿರಿಯಾಪಟ್ಟಣ, ಬೈಲುಕೊಪ್ಪ, ಕುಶಾಲನಗರ ಮಾರ್ಗದಿಂದ ರೈಲ್ವೆ ಸಂಸ್ಥೆಗೆ ಲಾಭ ತೆಗೆಯುವದು ಕಷ್ಟಕರ ಎನ್ನುವ ವರದಿ ಮೇರೆಗೆ ಈ ಯೋಜನೆ ಬಹುತೇಕ ನೆನೆಗುದಿಗೆ ಬಿದ್ದಂತಾಗಿದೆ. ಸರ್ವೆ ಕಾರ್ಯ ಸಂದರ್ಭ ಪಿರಿಯಾಪಟ್ಟಣ-ಕುಶಾಲನಗರ ನಡುವೆ ಕೆಲವು ಭೂ ಮಾಲೀಕರು ಅಡ್ಡಿಯುಂಟು ಮಾಡಿರುವದು ಈ ಯೋಜನೆ ನೆನೆಗುದಿಗೆ ಬೀಳಲು ಕಾರಣ ಎಂದರೆ ತಪ್ಪಾಗಲಾರದು. ರೈಲ್ವೆ ಭೂಪಟದಲ್ಲಿ ಹಳಿ ಇಲ್ಲದ ಜಿಲ್ಲೆ ಎನ್ನುವ ಖ್ಯಾತಿಗೆ ಒಳಗಾಗಿರುವ ಕೊಡಗಿಗೆ ರೈಲ್ವೆ ಮಾರ್ಗ ಒದಗಿಸುವ ಬಗ್ಗೆ ರಾಜ್ಯ ಸರಕಾರ ಸಂಪೂರ್ಣ ನಿರ್ಲಕ್ಷ್ಯ ತಾಳಿದೆ ಎನ್ನುತ್ತಾರೆ ಮೈಸೂರು-ಕೊಡಗು ಸಂಸತ್ ಸದಸ್ಯ ಪ್ರತಾಪ್ ಸಿಂಹ. ರಾಜ್ಯ ಸರಕಾರ ಯಾವದೇ ರೀತಿಯ ಸ್ಪಂದನೆ ನೀಡದಿರುವ ಹಿನ್ನೆಲೆ ಯೋಜನೆ ಹಿನ್ನಡೆ ಸಾಧಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಕೇಂದ್ರದ ಎರಡು ಬಜೆಟ್‍ನಲ್ಲಿ ಮೈಸೂರು-ಕುಶಾಲನಗರ ರೈಲ್ವೆ ಮಾರ್ಗದ ಬಗ್ಗೆ ಪ್ರಸ್ತಾಪ ಬಂದರೆ ಇನ್ನುಳಿದಂತೆ ನಕಾರಾತ್ಮಕ ಪ್ರತಿಕ್ರಿಯೆ ಅಧಿಕ ಎನ್ನಬಹುದು. ಕೊಡಗು ಜಿಲ್ಲೆಯ ಕುಶಾಲನಗರದ ಅಳಿಯ ಕೇಂದ್ರದ ಮಾಜಿ ರೈಲ್ವೆ ಸಚಿವ ಡಿ.ವಿ. ಸದಾನಂದ ಗೌಡರ ಭರವಸೆ ಕೂಡ ಹುಸಿಯಾಗುತ್ತಿದೆ.1981 ರಲ್ಲಿಯೇ ಮೈಸೂರಿನಿಂದ ಜಿಲ್ಲೆಗೆ ರೈಲು ಮಾರ್ಗ ನಿರ್ಮಾಣದ ಬಗ್ಗೆ ಯೋಜನೆಯ ಪ್ರಸ್ತಾವನೆ ಯಾಗಿತ್ತು. ಆದರೆ ಕಾರಣಾಂತರ ಗಳಿಂದ ಯೋಜನೆ ಕೈಬಿಡಲಾಗಿತ್ತು. ಕೊಡಗು ಜಿಲ್ಲೆಯ ಏಕೈಕ ಕೈಗಾರಿಕಾ ಬಡಾವಣೆಯೆಂಬ ಹೆಗ್ಗಳಿಕೆ ಯಲ್ಲಿರುವ ಕುಶಾಲನಗರ ತನಕ ರೈಲ್ವೆ ಮಾರ್ಗ ಬಂದಲ್ಲಿ ಕಾಫಿ ಉದ್ದಿಮೆಗೆ ನೆರವಾಗುವ ಸಾಧ್ಯತೆ ಬಗ್ಗೆ ಕನಸು ಚಿಗುರೊಡೆದಿತ್ತು.

ಕನಿಷ್ಟ ಕುಶಾಲನಗರದ ತನಕ ರೈಲ್ವೆ ಸಂಪರ್ಕ ಬಂದಲ್ಲಿ ಜಿಲ್ಲೆಯ ವ್ಯಾಪಾರ ವಹಿವಾಟು ಹಾಗೂ ಕೈಗಾರಿಕಾ ಉದ್ಯಮಗಳು ಶೀಘ್ರಗತಿ ಯಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯ ಎನ್ನುತ್ತಾರೆ ಚೇಂಬರ್ ಆಫ್ ಕಾಮರ್ಸ್ ಸ್ಥಾನೀಯ ಸಮಿತಿಯ ಅಧ್ಯಕ್ಷ ಪಿ.ಅಮೃತ್‍ರಾಜ್. ಇನ್ನೊಂದೆಡೆ ನೆರೆಯ ಟಿಬೇಟಿಯನ್ ನಾಗರಿಕರು ಜಿಲ್ಲೆಯಲ್ಲಿ ನೆಲೆ ನಿಂತಿರುವ ನೆರೆ ರಾಜ್ಯಗಳ ವ್ಯಾಪಾರಸ್ಥರು ಹಾಗೂ ಕಾರ್ಮಿಕರು ಮೈಸೂರು-ಕುಶಾಲನಗರ ರೈಲ್ವೆ ಸಂಪರ್ಕದ ಬಗ್ಗೆ ಶಬರಿಯಂತೆ ಕಾದು ಕುಳಿತಿದ್ದರೆ ಇತ್ತ ರಾಜಕೀಯ ದೊಂಬರಾಟದ ನಡುವೆ ಮೈಸೂರು ಕುಶಾಲನಗರ ರೈಲ್ವೆ ಯೋಜನೆ ಹಳಿತಪ್ಪುತ್ತಿದೆ.

- ಎಂ.ಎನ್. ಚಂದ್ರಮೋಹನ್