ಸೋಮವಾರಪೇಟೆ, ಮೇ 8: ಅಪರಿಚಿತ ವಾಹನವೊಂದು ಸ್ಕೊಟಿಗೆ ಡಿಕ್ಕಿಪಡಿಸಿದ ಪರಿಣಾಮ ಶಿಕ್ಷಕರೋರ್ವರು ತೀವ್ರವಾಗಿ ಗಾಯಗೊಂಡಿರುವ ಘಟನೆ ತಾಕೇರಿ ಗ್ರಾಮದಲ್ಲಿ ನಡೆದಿದೆ.

ಹಾನಗಲ್ಲು ಗ್ರಾಮದ ನಿವಾಸಿ, ಕಿರಗಂದೂರು ಸರ್ಕಾರಿ ಶಾಲೆಯ ಶಿಕ್ಷಕ ಹೆಚ್.ಆರ್.ರಮೇಶ್ ಗಾಯಗೊಂಡವರು.

ಹಾನಗಲ್ಲು ಗ್ರಾಮದಿಂದ ಕಿರಗಂದೂರು ಗ್ರಾಮಕ್ಕೆ ತನ್ನ ಸ್ಕೂಟಿಯಲ್ಲಿ ತೆರಳುತ್ತಿದ್ದ ಸಂದರ್ಭ ಮಧ್ಯಾಹ್ನ 1-30ರ ಸಮಯದಲ್ಲಿ ತಾಕೇರಿ ರಸ್ತೆಯಲ್ಲಿ ಅಪರಿಚಿತ ವಾಹನ ಡಿಕ್ಕಿಪಡಿಸಿದೆ.

ತಲೆಯ ಭಾಗಕ್ಕೆ ಗಾಯವಾಗಿ ಪ್ರಜ್ಞಾಹೀನರಾಗಿದ್ದ ರಮೇಶ್ ಅವರನ್ನು ಸ್ಥಳೀಯರು ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪಟ್ಟಣದ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.