ಭಾಗಮಂಡಲ, ಮೇ 9: ಒಂದೇ ಕುಟುಂಬದ ತಂದೆ, ಮಗ ಹಾಗೂ ಸೊಸೆ ಜೊತೆಯಲ್ಲೇ ನೇಣಿಗೆ ಶರಣಾಗಿರುವ ಹೃದಯವಿದ್ರಾವಕ ಘಟನೆ ಸಂಭವಿಸಿದೆ. ಇಲ್ಲಿನ ನಿವಾಸಿ ಗೋಪಾಲ್ ಆಚಾರ್ (70), ಅವರ ಪುತ್ರ ಪ್ರದೀಪ್ (32) ಹಾಗೂ ಸೊಸೆ ಮಂಜುಳ (28) ಸಾವಿಗೀಡಾದ ದುರ್ದೈವಿಗಳು.ಗೋಪಾಲ್ ಆಚಾರ್, ಪ್ರದೀಪ್ ಹಾಗೂ ಮಂಜುಳ ಅವರುಗಳು ಗ್ರಾ.ಪಂ. ಕಚೇರಿ ಬಳಿ ಇರುವ ತಮ್ಮ ಮನೆಯಲ್ಲಿ ನೆಲೆಸಿದ್ದರು. ಆಚಾರ್ ಅವರ ಪತ್ನಿ ಹಾಗೂ ಶಿಕ್ಷಕಿಯಾಗಿರುವ ಪುತ್ರಿ ಪವಿತ್ರ, ತಾವೂರಿನ ಕಾಲೇಜು ಬಳಿಯ ಮನೆಯೊಂದರಲ್ಲಿ ನೆಲೆಸಿದ್ದಾರೆ. ಇಂದು ಸಂಜೆ ವೇಳೆಗೆ ಪ್ರದೀಪ್ ಮನೆಗೆ ಬಂದು ನೋಡುವಾಗ ಮಂಜುಳ ನೇಣಿಗೆ ಶರಣಾಗಿರುವದು ಗೋಚರಿಸಿದೆ. ಕೂಡಲೇ ಪ್ರದೀಪ ತಂದೆಗೆ ವಿಷಯ ತಿಳಿಸಿದ್ದು, ಇಬ್ಬರು ತಾವೂರಿಗೆ ತೆರಳಿ ಪುತ್ರಿ ಹಾಗೂ ಮಗಳಲ್ಲಿ ವಿಚಾರ ತಿಳಿಸಿದ್ದು, ನಾವೂ ಕೂಡ ಸಾಯುವದಾಗಿ ಹೇಳಿ ವಾಪಸ್ ಬಂದಿದ್ದಾರೆ. ಸಂಜೆ 6.30ರ ವೇಳೆಗೆ ತಂದೆ, ಮಗ ರಸ್ತೆಯಲ್ಲಿ ನಡೆದುಕೊಂಡು

(ಮೊದಲ ಪುಟದಿಂದ) ಹೋಗುತ್ತಿರುವದನ್ನು ಸ್ಥಳೀಯರು ನೋಡಿದ್ದಾರೆ. ಮನೆಗೆ ಹೋದವರು ತಾವೂ ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ತಪ್ಪಿಸಲಾಗಲಿಲ್ಲ

ಇತ್ತ ಅಪ್ಪ ಹಾಗೂ ಸಹೋದರ ಆತ್ಮಹತ್ಯೆ ಮಾಡಿಕೊಳ್ಳುವದಾಗಿ ಹೇಳಿ ಹೋದ ಬಳಿಕ ಗಾಬರಿಗೊಂಡ ಪವಿತ್ರ ಯಾರಿಗೆ ವಿಚಾರ ತಿಳಿಸುವದೆಂದು ಗೊತ್ತಾಗದೇ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಕಂಟ್ರೋಲ್ ರೂಂನಿಂದ ಕೂಡಲೇ ಭಾಗಮಂಡಲ ಠಾಣೆಗೆ ಮಾಹಿತಿ ರವಾನೆಯಾಗಿದ್ದು, ಅಲ್ಲಿಂದ ಇಬ್ಬರು ಪೊಲೀಸರು ಒಡನೇ ಆಚಾರ್ ಮನೆಯತ್ತ ದೌಡಾಯಿಸಿದ್ದಾರೆ. ಆದರೆ ಅಷ್ಟರಲ್ಲೇ ಅಪ್ಪ-ಮಗನ ಶವ ಸೂರಿನಲ್ಲಿ ನೇತಾಡುತ್ತಿದ್ದಿತೆನ್ನಲಾಗಿದೆ.

ಕುಟುಂಬ ಸದಸ್ಯರ ಈ ರೀತಿ ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ಭಾಗಮಂಡಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾರಣ ಇನ್ನಷ್ಟೇ ತಿಳಿಯಬೇಕಿದೆ. -ಸುನಿಲ್